-
ಮಂಡ್ಯದ ರಾಗಿ ಲಕ್ಷ್ಮಣ್ಣಯ್ಯ ಸ್ಮಾರಕ ಸಮಿತಿಯು ಹರ್ಷ
- ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇದೇ ಫೆಬ್ರವರಿ 12 ರಿಂದ 17 ರವರೆಗೆ ಜರುಗಲಿರುವ ಅಂತರರಾಷ್ಟ್ರೀಯ ಸಂಶೋಧನಾ ಸಮ್ಮೇಳನ
- ಪ್ರೀತಿ ಕಾಂಬಳೆಯವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕುಡಚಿ ಹೋಬಳಿಯ ಹಾಲಶಿರಗೂರು ಗ್ರಾಮದವರು.
ಮಂಡ್ಯದ ರಾಗಿ ಸಂಶೋಧನೆಯ ಕೀರ್ತಿ ಪತಾಕೆಯನ್ನು ಅಮೇರಿಕಾದಲ್ಲಿ ಹಾರಿಸಲಿರುವ ಪ್ರೀತಿ ಕಾಂಬಳೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇದೇ ಫೆಬ್ರವರಿ 12 ರಿಂದ 17 ರವರೆಗೆ ಜರುಗಲಿರುವ ಅಂತರರಾಷ್ಟ್ರೀಯ ಸಂಶೋಧನಾ ಸಮ್ಮೇಳನದಲ್ಲಿ ಮಂಡ್ಯದ ವಿ. ಸಿ. ಫಾರಂನ ಮಾಸ್ಟರ್ಸ್ ಪದವಿಯ ವಿದ್ಯಾರ್ಥಿನಿಯಾದ ಪ್ರೀತಿ ಕಾಂಬಳೆ ಅವರು, ರಾಗಿ ತಳಿಯ ಪೌಷ್ಟಿಕಾಂಶಗಳ ಅನುವಂಶಿಕ ಧಾತುಗಳ ಕುರಿತು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.
ಈ ಕುರಿತು ಮಂಡ್ಯದ ರಾಗಿ ಲಕ್ಷ್ಮಣ್ಣಯ್ಯ ಸ್ಮಾರಕ ಸಮಿತಿಯು ಹರ್ಷ ವ್ಯಕ್ತಪಡಿಸುತ್ತದೆ. ಸಮಿತಿಯ ಪರವಾಗಿ ಅಧ್ಯಕ್ಷರಾದ ಕೆ. ಬೋರಯ್ಯ, ಕಾರ್ಯದರ್ಶಿಗಳಾದ ಪ್ರೊ. ಗುಬ್ಬಯ್ಯನವರು, ಹಾಗೂ ವಿ. ಸಿ. ಫಾರಮ್ಮಿನ ಕೃಷಿ ಮಹಾವಿದ್ಯಾಲಯದ ಡೀನ್ ಆದ ಡಾ. ಎಸ್. ಎಸ್. ಪ್ರಕಾಶ್ ಅವರು ಶುಭ ಕೋರಿದ್ದಾರೆ.
ಪ್ರೀತಿ ಕಾಂಬಳೆಯವರು ಮಂಡ್ಯದ ಕೃಷಿ ಕಾಲೇಜಿನಲ್ಲಿ ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದಲ್ಲಿ ಎರಡನೇ ವರ್ಷದ ಮಾಸ್ಟರ್ ಪದವಿಯ ಅಧ್ಯಯನ ಮಾಡುತ್ತಿದ್ದಾರೆ. ರಾಗಿ ಲಕ್ಷ್ಮಣ್ಣಯ್ಯನವರ ಮೂಲಕ ರಾಗಿ ತಳಿಗಳ ಅಭಿವೃದ್ಧಿಗೆ ಮಂಡ್ಯದ ವಿ. ಸಿ. ಫಾರಂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿದೆ. ಮತ್ತೊಮ್ಮೆ ವಿ. ಸಿ. ಫಾರಂ ನ ರಾಗಿ ತಳಿಗಳ ಸಂಶೋಧನಾ ಪರಂಪರೆಯ ಪತಾಕೆಯನ್ನು ಪ್ರೀತಿ ಕಾಂಬಳೆಯವರು ಜಾಗರಿಕ ಮಟ್ಟದಲ್ಲಿ ಹಾರಿಸಲಿದ್ದಾರೆ ಎನ್ನುವುದು ಮಂಡ್ಯ ಹಾಗೂ ಕರ್ನಾಟಕದ ಜನತೆಗೆ ಸಂತಸದ ಸಂಗತಿ.
ಇದನ್ನೂ ಓದಿ : ಅಮೆರಿಕಾದಲ್ಲಿ ರಾಗಿಯ ‘ನ್ಯೂಟ್ರೀಷಿಯನ್ ಜಿನ್’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಲಿರುವ ಪ್ರೀತಿ ಕಾಂಬಳೆ
ಪ್ರೀತಿ ಕಾಂಬಳೆಯವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕುಡಚಿ ಹೋಬಳಿಯ ಹಾಲಶಿರಗೂರು ಗ್ರಾಮದವರು. ಮೂಡಿಗೆರೆಯ ತೋಟಗಾರಿಕೆ ಕಾಲೇಜಿನಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ. ಬಡಕುಟುಂಬದಿಂದ ಬಂದ ಇವರು ಬಡಜನರು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವುದನ್ನು ಕಂಡು, ಪೌಷ್ಟಿಕ ಆಹಾರವಾದ ರಾಗಿಯ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಇವರ ಅಧ್ಯಯನಕ್ಕೆ ವಿಜ್ಞಾನಿಗಳಾದ ಡಾ. ಎಚ್. ಬಿ. ಮಹೇಶ್, ಡಾ. ಎಸ್. ಎಸ್. ಪ್ರಕಾಶ್, ಡಾ. ಎಸ್. ಬಿ. ಯೋಗಾನಂದ ಹಾಗೂ ಡಾ. ಪಿ. ಮಹದೇವು ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ.
ರಾಗಿಯಲ್ಲಿರುವ ಪೌಷ್ಟಿಕಾಂಶದ ಅನುವಂಶಿಕ ಧಾತುಗಳ ಕುರಿತು ತಮ್ಮ ಅಧ್ಯಯನದ ಫಲಿತಾಂಶಗಳನ್ನು ಪ್ರೀತಿ ಕಾಂಬಳೆಯವರು ಅಮೇರಿಕಾದ ಸಮ್ಮೇಳನದಲ್ಲಿ ಮಂಡಿಸಲಿದ್ದಾರೆ. ಪ್ರಾಕೃತಿಕ ವೈಪರೀತ್ಯಗಳು ಹಾಗೂ ಜಾಗತಿಕ ತಾಪಮಾನದಿಂದ ವಿವಿಧ ಬೆಳೆಗೆ ಉತ್ಪಾದನೆಯ ಪ್ರಮಾಣ ಕಡಿಮೆಯಾಗುವ ಸಂಭವವಿದೆ. ಇಂತಹ ಸಮಸ್ಯೆಯನ್ನು ಅನುವಂಶಿಕ ಧಾತುಗಳ ಅಧ್ಯಯನದ ಮೂಲಕ ಬಗೆಹರಿಸಬಹುದಾಗಿದೆ. ಈ ಕುರಿತಾದ ಇವರ ಸಂಶೋಧನೆಯ ಫಲಿತಾಂಶಗಳು ರಾಗಿ ತಳಿಗಳ ಆವಿಷ್ಕಾರದಲ್ಲಿ ಮತ್ತಷ್ಟು ಬೆಳಕು ಚೆಲ್ಲಲಿ ಎಂದು ರಾಗಿ ಲಕ್ಷ್ಮಣ್ಣಯ್ಯ ಸ್ಮಾರಕ ಸಮಿತಿಯು ಹಾರೈಸಿದೆ.