ಶ್ರೀರಂಗಪಟ್ಣಣ ತಾಲ್ಲೂಕಿನ ತಡಗವಾಡಿ ಗ್ರಾಮ ಪಂಚಾಯಿತಿ ಪಿಡಿಓ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೇ ವಿನಾಕಾರಣ ಅಲೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ.ಅಧ್ಯಕ್ಷ ಜಿ.ಎನ್.ಮಧುಗೌಡ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಎದುರು ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.
ತಡಗವಾಡಿ ಗ್ರಾ.ಪಂ.ಪಿಡಿಓ ತಿಲಕ್ ಕುಮಾರ್ ಜನರ ಕೆಲಸ ಮಾಡದೆ ಅವರನ್ನು ಅಲೆದಾಡಿಸುತ್ತಿದ್ದಾರೆ. ಸರ್ಕಾರದ ನಿಯಮದಂತೆ ವಸತಿ ಯೋಜನೆಯಡಿ ಫಲಾನುಭವಿಗಳ ಪಟ್ಟಿ ತಯಾರಿಸಿ ಕೊಡಲಾಗಿದೆ.
ಅದರೆ ಪಿಡಿಒ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.
ಸ್ವಂತಮನೆ ನಿರ್ಮಿಸಿಕೊಳ್ಳುವ ಆಸೆಯಿಂದ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಂಡಿರುವ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದರಲ್ಲಿ ಪಿಡಿಓ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಕಳೆದ ಜನವರಿಯಿಂದಲೂ ಸರಿಯಾಗಿ ಪಿಡಿಓ ಅವರು ಲಭ್ಯವಿಲ್ಲದೆ,ಮಾಹಿತಿಯೂ ನೀಡದೇ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆಯೂ ಯಾವ ವಿಚಾರವನ್ನು ತಿಳಿಸದೆ ಯೋಜನೆಯ ಕಾರ್ಯಕ್ರಮಗಳ ಅನುದಾನವು ವಾಪಸ್ ಹೋಗುತ್ತಿವೆ ಎಂದು ಆರೋಪಿಸಿದರು.
ಗ್ರಾ.ಪಂ.ಸದಸ್ಯರಾದ ಸುಮಿತ್ರಾ ಪುಟ್ಟಸ್ವಾಮಿ, ಸುಕನ್ಯಾ ಲೋಕೇಶ್, ಶಾರದಾ ಮಾದೇಗೌಡ, ಮುಖಂಡರಾದ ಪ್ರಭಾಕರ್, ರಾಮಚಂದ್ರು, ಶಂಕರೇಗೌಡ, ಶ್ರೀನಿವಾಸ್ ಜವರೇಗೌಡ, ಉಮಾ ಸೇರಿದಂತೆ ವಿವಿಧ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.