ಶಾಲಾ ಅವಧಿಯಲ್ಲಿ ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ತರಗತಿಗೆ ಚಕ್ಕರ್ ಹೊಡೆದು ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕುಳಿತು ಹರಟೆ ಹೊಡೆಯುತ್ತಾ, ಕಾಲ ಕಳೆದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಶಾಲಾ ಅವಧಿಯಲ್ಲಿಯೇ ಬಾರ್ನಲ್ಲಿ ಅಮಲೇರಿಸಿಕೊಂಡು ಮೋಜು ಮಾಡಿದ್ದಾರೆ. ಶಿಕ್ಷಕರು ಮದ್ಯಪಾನ ಮಾಡುತ್ತಿರುವುದನ್ನು ವಿದ್ಯಾರ್ಥಿಗಳ ಪೋಷಕರು ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮುರಳೀಧರ ರಾವ್, ದೈಹಿಕ ಶಿಕ್ಷಕ ಚನ್ನಪ್ಪ ರಾಠೋಡ್, ಸಹ ಶಿಕ್ಷಕ ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಅವರು ಪಾರ್ಟಿ ಮಾಡುತ್ತಿರುವುದು ಸೆರೆಯಾಗಿದೆ.
ಊಟದ ವಿರಾಮದ ವೇಳೆ ಹೊರಗೆ ಹೋಗುವ ಎಲ್ಲ ಸಿಬ್ಬಂದಿಗಳು ಬಾರ್ಗೆ ಹೋಗಿ ಸಂಜೆಯಾದರೂ ಶಾಲೆಗೆ ವಾಪಾಸ್ ಬರುವುದಿಲ್ಲ. ಒಂದು ವೇಳೆ ಶಾಲಾ ಅವಧಿಯಲ್ಲಿ ವಾಪಸ್ ಬಂದರೂ ಪಾಠ ಮಾಡುವ ಸ್ಥಿತಿಯಲ್ಲಿ ಅವರಾರು ಇರುವುದಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯ ಅವಧಿಯಲ್ಲಿಯೇ ಮದ್ಯದ ಅಮಲಿನಲ್ಲಿದ್ದ ಶಿಕ್ಷಕರ ವಿರುದ್ಧ ಸಾರ್ವಜನಿರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯಲೋಪ ಎಸಗಿರುವ ಶಿಕ್ಷಕರನ್ನು ಅಮಾನತು ಮಾಡಬೇಕು ಎಂದು ಡಿಡಿಪಿಐ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.