ಬೆಂಗಳೂರಿನಲ್ಲಿ ಸೋಮವಾರ ರೈತ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಯುದ್ಧವೀರ್ ಸಿಂಗ್ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದ ಜೆ.ಸಿ.ವೃತ್ತದಲ್ಲಿ ಪ್ರತಿಭಟನಾಕಾರರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ ನಾಯಕರಿಬ್ಬರ ಮೇಲಿನ ದಾಳಿಯನ್ನು ಖಂಡಿಸಿದರು. ದಾಳಿಯ ಹಿಂದೆ ಬಿಜೆಪಿ ಹಾಗೂ ಆರ್ಎಸ್ಎಸ್ ಗೂಂಡಾಗಳ ಕೈವಾಡವಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತನಾಯಕರ ಮೇಲೆ ಮಸಿ ಎರಚಿ ಹಲ್ಲೆ ಮಾಡಿರುವ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶವ್ಯಾಪಿ 13 ತಿಂಗಳು ನಡೆದ ಸುದೀರ್ಘ ರೈತ ಪ್ರತಿಭಟನೆಯ ನಂತರ ರೈತ ವಿರೋಧಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರ ಕ್ಷಮೆ ಕೇಳುವಂತೆ ಮಾಡಿತ್ತು.
ಈ ಹೋರಾಟದಲ್ಲಿ ರಾಕೇಶ್ ಸಿಂಗ್ ಟಿಕಾಯತ್ ಮುಂಚೂಣಿಯಲ್ಲಿದ್ದರು. ಆದರೆ ಕಾಯ್ದೆ ವಾಪಸ್ ಪಡೆಯುವಂತೆ ಮಾಡಿದ ಹತಾಶೆಯಿಂದ ಬಿಜೆಪಿ ಹಾಗೂ ಆರ್ಎಸ್ಎಸ್ ಗೂಂಡಾಗಳು ಇಂತಹ ಕೀಳು ದುಷ್ಕೃತ್ಯಕ್ಕೆ ಇಳಿದಿದ್ದಾರೆ. ಇಂತಹ ದಾಳಿಯನ್ನು ಹೇಡಿಗಳು ಮಾತ್ರವೇ ಮಾಡುತ್ತಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ದಾಳಿಯ ಸೂತ್ರಧಾರರು ಹಾಗೂ ಪಾತ್ರಧಾರಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಕಾಯ್ದೆ ವಿಚಾರದಲ್ಲಿ ಭಂಡತನ ಮುಂದುವರೆಸುತ್ತಿದೆ. ಆದ್ದರಿಂದ ಕೂಡಲೇ ಮೂರು ಕಾಯ್ದೆ ಜತೆಗೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜ್ಞೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಸಂಘಟನೆಯ ಸಿ.ಕುಮಾರಿ, ರೈತ ಸಂಘದ ಸುನಂದಾ ಜಯರಾಂ, ಪ್ರೊ.ಹುಲ್ಕೆರೆ ಮಹದೇವು, ಜಿ.ಟಿ.ವೀರಪ್ಪ,ಎಸ್ ಡಿಪಿಐನ ಮಹಮದ್ ತಾಯೇರ್, ಷಣ್ಮುಖೇಗೌಡ, ಕೆ.ಬೋರಯ್ಯ, ಕೃಷ್ಣೇಗೌಡ, ಎ.ಎಲ್.ಕೆಂಪೂಗೌಡ, ಬೋರಾಪುರ ಶಂಕರೇಗೌಡ ಇತರರಿದ್ದರು.