Thursday, May 16, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿನ ರಾಜಕಾರಣಿಗಳಂತೆ ನಮ್ಮಲ್ಲೂ ಒಂದಾಗಿ ಹೋರಾಡಬೇಕಿದೆ : ಎಚ್.ಡಿ.ದೇವೇಗೌಡ

ನದಿ ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಯಾರೂ ಒಂದಾಗಲ್ಲ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಹಕಾರ ಕೊಡುತ್ತಿಲ್ಲ. ಕಾವೇರಿ, ಕಬಿನಿ, ಕೃಷ್ಣ, ಮಹದಾಯಿ ಸೇರಿದಂತೆ ಬಹುತೇಕ ಅಂತಾರಾಜ್ಯ ನದಿಗಳಿವೆ. ಹೀಗಾಗಿ, ದಯವಿಟ್ಟು ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ ನಾನು ರಾಜ್ಯಸಭೆಯಲ್ಲಿ ಕೈ ಮುಗಿದು ಮನವಿ ಮಾಡಿದ್ದೇನೆ. ಆದರೆ, ನಮಗೆ ಯಾವ ಪಕ್ಷದವರೂ ಸಹಕಾರ ಕೊಡುತ್ತಿಲ್ಲ. ನಮ್ಮದು ಒಂದು ಪ್ರಾದೇಶಿಕ ಪಕ್ಷ. ನೀರಿನ ವಿಚಾರಕ್ಕೆ ಬಿಜೆಪಿ ಆಗಲಿ, ಕಾಂಗ್ರೆಸ್‌ನವರೇ ಆಗಲಿ, ಯಾರೂ ಮಾತನಾಡಿಲ್ಲ. ಕರ್ನಾಟಕಕ್ಕೆ ನೀರಾವರಿ ವಿಚಾರದಲ್ಲಿ ವಂಚನೆ ಆಗುತ್ತಿದೆ ಇದು ಒಂದು ಜಾತಿಯ ಪ್ರಶ್ನೆ ಅಲ್ಲ, ವ್ಯಕ್ತಿಯ ಪ್ರಶ್ನೆಯೂ ಅಲ್ಲ. ಇದು ಈ‌ ನಾಡಿನ ಜನರ ಪ್ರಶ್ನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ಮಾತ್ರವಲ್ಲ, ಮಹದಾಯಿ ವಿಚಾರದಲ್ಲೂ ತಮಗೆ ಸಾಕಷ್ಟು ನೋವಿದೆ.ಗೋವಾ ರಾಜ್ಯದ ಜೊತೆ ಮಾತುಕತೆ ನಡೆದಿಲ್ಲ.ಈ ಬಗ್ಗೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡುವುದಾಗಿ ನುಡಿದರು.

ಕುಮಾರಸ್ವಾಮಿ ಕಲ್ಪನೆಯ ಕೂಸು ಜನತಾ ಜಲಧಾರೆ

ನಮ್ಮ ಪಕ್ಷದ ಎಲ್ಲಾ ಮುಖಂಡರು ಸೇರಿ ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಭಾಗದಲ್ಲಿ ಕಬಿನಿ ಜಲಾಶಯದಿಂದಲೇ ಪ್ರಾರಂಭ ಮಾಡಿದ್ದೇವೆ. ರಾಜ್ಯದ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಾರಣಕ್ಕೆ ಆಯೋಜಿಸಿರುವ ಈ ಕಾರ್ಯಕ್ರಮವು ಕುಮಾರಸ್ವಾಮಿಯವರ ಕಲ್ಪನೆಯ ಕೂಸು ಎಂದು ತಿಳಿಸಿದರು.

ಜನತಾ ಜಲಧಾರೆ ಕಾರ್ಯಕ್ರಮದ ಅಂಗವಾಗಿ ಎಲ್ಲ ಕಡೆಗೂ ನಾನು ಹೋಗುತ್ತೇನೆ. ನನಗೆ 90 ವರ್ಷ ವಯಸ್ಸು. ಆದರೂ ಸ್ವಲ್ಪ ಹೋರಾಟ ಮಾಡುವ ಆಸೆ ಇದೆ. ನಾನು ಶಕ್ತಿ ಮೀರಿ ಈ ಭಾಗದ ಜನತೆಯ ನೀರಿನ ಹಕ್ಕಿಗಾಗಿ ಹೋರಾಟ ಮಾಡಿದ್ದೇನೆ. ಈಗಲೂ ನಾನು ಜನರಿಗೆ ಅನ್ಯಾಯ ಆಗಲು ಬಿಡುವುದಿಲ್ಲ.ನೀರಿನ ವಿಚಾರಕ್ಕೆ ಬಿಜೆಪಿ ಆಗಲಿ, ಕಾಂಗ್ರೆಸ್‌ನವರೇ ಆಗಲಿ, ಯಾರೂ ಮಾತನಾಡಿಲ್ಲ. ಇದು ನಮ್ಮ ರಾಜ್ಯದ ದುರಾದೃಷ್ಟ. ನೀರಾವರಿ ವಿಚಾರದಲ್ಲಿ ನಮ್ಮ ಪರ ಯಾರೂ ಇಲ್ಲ. ಕರ್ನಾಟಕಕ್ಕೆ ನೀರಾವರಿ ವಿಚಾರದಲ್ಲಿ ವಂಚನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Previous article
Next article
ರಾಜ್ಯದ ಎಲ್ಲಾ ನದಿಗಳ ಪರ ಜೆಡಿಎಸ್ ಹೋರಾಡುತ್ತಿದೆ:ರವೀಂದ್ರ ಶ್ರೀಕಂಠಯ್ಯ
ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರವನ್ನು ಮುಂದಿಟ್ಟುಕೊಂಡು ಮಾತ್ರ ಪಾದಯಾತ್ರೆ ಮಾಡಿದೆ.ಆದರೆ ಜೆಡಿಎಸ್ ಪಕ್ಷ ದೇವೇಗೌಡರ ನೇತೃತ್ವದಲ್ಲಿ ಕಾವೇರಿ, ಕೃಷ್ಣ,ಮಹದಾಯಿ ಸೇರಿದಂತೆ ರಾಜ್ಯದ ಎಲ್ಲಾ ನದಿಗಳ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಗುಡುಗಿದರು.
ಶ್ರೀರಂಗಪಟ್ಟಣದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮೇಕೆದಾಟು ಯೋಜನೆ ತನ್ನದು ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಳ್ಳುತ್ತದೆ.ಆದರೆ ಮೇಕೆದಾಟು ಅಣೆಕಟ್ಟಿನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ. ಜೆಡಿಎಸ್ ಪಕ್ಷ ಮೊದಲಿನಿಂದಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ನದಿಗಳ ಪರ ಹೋರಾಟ ರೂಪಿಸಿಕೊಂಡು ಬಂದಿದೆ.ನೀರಾವರಿ ವಿಚಾರದಲ್ಲಿ ಜೆಡಿಎಸ್ ಹೋರಾಟ ಎಂದೆಂದಿಗೂ ನಿರಂತರವಾಗಿ ಇರುತ್ತದೆ ಎಂದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಅತಿಹೆಚ್ಚು ಅನುದಾನ ನೀಡಿದ ಹೆಗ್ಗಳಿಕೆ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ. ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡಿದಾಗ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ರಾಜ್ಯಕ್ಕೆ ಹೆಚ್ಚವರಿ ಪಾಲು ದೊರೆಯಿತು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!