ಮಂಡ್ಯನಗರದ ಹೃದಯ ಭಾಗವಾದ ನಂದ ಚಿತ್ರಮಂದಿರ ಸಮೀಪ ರೈಲ್ವೇ ಮೇಲ್ಸೇತುವೆಯಿಂದ ಕಾರಿಮನೆ ಗೇಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಗುಂಡಿಗಳು ಬಲಿಗಾಗಿ ಕಾದು ಕೂತಿವೆ.
ಕೆಲವು ತಿಂಗಳುಗಳ ಹಿಂದೆ ಚಿಕ್ಕಮಂಡ್ಯದ ಯೋಧರೊಬ್ಬರು ರಸ್ತೆ ಗುಂಡಿಗೆ ಬಲಿಯಾದ ನಂತರ ಮಂಡ್ಯನಗರದ ರಸ್ತೆಗಳ ಅವ್ಯವಸ್ತೆ ಇಡೀ ರಾಜ್ಯದ ಗಮನ ಸೆಳೆದು, ನಾಗರೀಕರು ಇಡೀ ಶಾಪ ಹಾಕುವಂತಾಗಿತ್ತು. ಆದರೆ ಮೊನ್ನೆಯಷ್ಟೆ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಅವರ ಇಚ್ಚಾಸಕ್ತಿಯಿಂದಾಗಿ ಕಾರಿಮನೆ ಗೇಟ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನಷ್ಟೆ ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡಲಾಗಿದೆ.
ಆದರೆ ಅದೇ ರಸ್ತೆಗೆ ಸಂಪರ್ಕ ಕಲ್ಪಿಸುವ ತಮಿಳು ಸ್ಲಂ ಮೂಲಕ ಹಾದು ನಂದ ಚಿತ್ರಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ತೀವ್ರವಾಗಿ ಗುಂಡಿ ಬಿದ್ದಿದ್ದರೂ ಜನಪ್ರತಿನಿಧಿಗಳು ಮಾತ್ರ ಯಾವುದೇ ಗಮನ ಹರಿಸಿಲ್ಲ, ಇದರ ಪರಿಣಾಮ ವಾಹನ ಸವಾರರು ತೀವ್ರವಾದ ಪ್ರಯಾಸದಿಂದ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಅಲ್ಲದೇ ನಾಗಮಂಗಲ, ಕೊಪ್ಪ, ಹಲ್ಲೇಗೆರೆ ಭಾಗದಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ದಿನನಿತ್ಯ ಆಂಬುಲೆನ್ಸ್ ಗಳು ಇದೇ ಮಾರ್ಗವಾಗಿ ಓಡಾಡುತ್ತಿದ್ದು, ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳು ತೀವ್ರ ಅಡಚಣೆ ಉಂಟು ಮಾಡುತ್ತಿದೆ, ಆದ್ದರಿಂದ ಕೂಡಲೇ ಮಂಡ್ಯ ನಗರಸಭೆ ಹಾಗೂ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸರಿಪಡಿಸಬೇಕೆಂದು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.