ತಮಿಳುನಾಡಿಗೆ ನೀರು ಹರಿಸಬೇಕೆಂದು ಕಾವೇರಿ ನದಿ ನೀರು ಪ್ರಾಧಿಕಾರ ಆದೇಶ ನೀಡಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಮಂಗಳವಾರ ಸಂಜೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ದಿಢೀರ್ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
15 ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರನ್ನು ಬಿಡಬೇಕೆಂದು ಅದೇಶ ನೀಡಿರುವುದು ಜಿಲ್ಲೆಯ ಜನರಿಗೆ ಮರಣ ಶಾಸನವಾಗಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಪ್ರಾಧಿಕಾರದ ಆದೇಶ ಕಾವೇರಿ ಕೊಳ್ಳದ ರೈತರ ಪಾಲಿಗೆ ಕರಾಳವಾದ ತೀರ್ಪಾಗಿದೆ. ಕರ್ನಾಟಕ ಸರ್ಕಾರ ಈಗಲಾದರೂ ಅಳಿದುಳಿದ ನೀರನ್ನು ಉಳಿಸಿಕೊಳ್ಳಬೇಕು. ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಸುನಂದಾ ಜಯರಾಂ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಶಂಭೂನಹಳ್ಳಿ ಕೃಷ್ಣ, ಮಂಜುನಾಥ್ ಕನ್ನಡಸೇನೆ, ಮುದ್ದೇಗೌಡ, ಸಾತನೂರು ವೇಣುಗೋಪಾಲ್, ಶಿವು, ರವಿ, ಪ್ರಸನ್ನ, ಬೇಲೂರು ಶ್ರೀನಿವಾಸ್, ಶಿವಾಲಿ, ಯೋಗಾನಂದ್ ಮತ್ತಿತರರು ಭಾಗವಹಿಸಿದ್ದರು.