ತುಮಕೂರು ತಾಲೂಕಿನ ವಕ್ಕೋಡಿ ಬಳಿ ಶನಿವಾರ ರಾತ್ರಿ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
“ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ನಗರ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರೌಡಿಶೀಟರ್ ಮನೋಜ್ ಅಲಿಯಾಸ್ ಮಂಡೇಲಾ ಎಂಬಾತನನ್ನು ಬಂಧಿಸಿದ್ದಾರೆ” ಎಂದು ಎಸ್ಪಿ ಕೆ ವಿ ಅಶೋಕ್ ತಿಳಿಸಿದ್ದಾರೆ.
ಮನೋಜ್ ಮತ್ತು ಇತರರು ಶನಿವಾರ ಬೆಳಗ್ಗೆ ಬಂಡೆನಾಗ ಎಂಬ ಮತ್ತೊಬ್ಬ ರೌಡಿಶೀಟರ್ ಮೇಲೆ ದಾಳಿ ನಡೆಸಿದ್ದರು. ಈ ಕುರಿತು ಬಂಡೆನಾಗ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ದೂರು ನೀಡಿದ್ದನು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಆಧಾರಿಸಿ ಮನೋಜ್ ಮತ್ತು ಸಹಚರರನ್ನು ಬಂಧಿಸಲು ವಕ್ಕೋಡಿ ಬಳಿ ಹೋಗಿದ್ದರು. ಈ ವೇಳೆ ನಗರ ಠಾಣೆಯ ಎಎಸ್ಐ ಮಲ್ಲೇಶ್, ಹೆಡ್ ಕಾನ್ಸ್ಟೆಬಲ್ ಮಹ್ಮದ್ ನಯಾಜ್ ಮೇಲೆ ಮನೋಜ್ ಡ್ರ್ಯಾಗರ್ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪೊಲೀಸರು ಮನೋಜ್ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.