ಕೇಂದ್ರ ಸರ್ಕಾರವು ಲೋಕಸಭಾ ಚುನಾವಣೆಗೂ ಮುನ್ನ ಗಂಗಮಸ್ಥ ಮತ್ತು ಉಪಪಂಗಡಗಳನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರಿಸಿ ಎಂದು ರಾಜ್ಯ ಗಂಗಮಸ್ಥರರ ಸಂಘದ ಗೌರವಾಧ್ಯಕ್ಷ ಕೃಷ್ಣಯ್ಯ ಹೇಳಿದರು.
ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಬೆಸ್ತರ ಭೀಷ್ಮಪಡೆ ಹಾಗೂ ಬೆಸ್ತ ಸಮುದಾಯದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎಸ್.ಟಿ ಸೇರ್ಪಡೆ ಕುರಿತು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿರುವ ಕೋಳಿ ಸಮಾಜ, ಗಂಗಮತಸ್ಥ ಸೇರಿದಂತೆ 37 ಪಂಗಡಗಳನ್ನು 2024ರ ಲೋಕಸಭಾ ಚುನಾವಣೆಗೂ ಎಸ್ಟಿ ಮೀಸಲು ಪಟ್ಟಿಗೆ ಸೇರಿಸಬೇಕು, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ, ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ, ದೆಹಲಿಯ ಪೈಲ್ ಇದೆ, ಮೂರು ಕಂಡಿಕೆಗಳನ್ನು ಸರಿಪಡಿ ಎಂದು ಪೈಲು ಬೆಂಗಳೂರಿನ ಸಮಾಜಕಲ್ಯಾಣ ಇಲಾಖೆಗೆ ವಾಪಸ್ ಬಂದಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.
ಗುಲ್ಬರ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಅಮಿತ್ ಶಾ ಅವರು ಮಾತು ಕೊಟ್ಟ ಪ್ರಕಾರ ನಡೆದುಕೊಳ್ಳಬೇಕು, ಜಿಲ್ಲೆಯಲ್ಲಿ ಸುಮಾರು 2 ಲಕ್ಷದ 20 ಸಾವಿರ ಮಂದಿ ಹಾಗೂ 50 ಲಕ್ಷ ಮಂದಿ ಕೋಳಿ ಸಮಾಜ, ಗಂಗಮತಸ್ಥರು ಇದ್ದೇವೆ, ಹೋರಾಟಕ್ಕೂ ಮುಂದಾಗಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಎಸ್ಟಿ ಮೀಸಲು ಪಟ್ಟಿಗೆ ಸೇರಿಸಲು ಸಂಘಟನೆಯೂ ರೂಪುಗೊಂಡಿದೆ, ಹೋರಾಟದ ರೂಪರೇಷೆಗಳನ್ನು ಚರ್ಚಿಸಲಿದ್ದೇವೆ, ಕಮಿಟಿಯಲ್ಲಿ ತೀರ್ಮಾನಿಸಿದ ರೀತಿಯಲ್ಲಿ ಸಮುದಾಯ ಹೋರಾಟಕ್ಕೆ ಇಳಿಯಲಿದೆ ಎಂದರು.
ಜಿಲ್ಲಾ ಬೆಸ್ತರ ಭೀಷ್ಮಪಡೆ ಪ್ರಧಾನ ಕಾರ್ಯದರ್ಶಿ ಸಂತೆಕಸಲಗೆರೆ ಬಸವರಾಜ್ ಮಾತನಾಡಿ, ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಬೃಹತ್ ಸಭೆ ನಡೆಸಲು ಪೂರ್ವಭಾವಿ ಸಭೆ ನಡೆಸಲಿದ್ದೇವೆ, ಪ್ರತಿ ಗ್ರಾಮಗಳಲ್ಲಿರುವ ಗಂಗಮತಸ್ಥರ ಸಮಾಜವನ್ನು ಭೇಟಿ ಮಾಡಿ, ಎಸ್ಟಿ ಮೀಸಲು ವಿಷಯ ತಿಳಿಸಿ ಜಾಗೃತಿ ಮೂಡಿಸಿ, ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕನ್ನಲಿ ದೇವರಾಜ್, ಕಾರ್ಯಾಧ್ಯಕ್ಷ ಶಿವರಾಜ್, ಬಿಜಾಪುರದ ಶಿವಾಜಿ ಮೆಟಗಾರ್, ಯಾದಗಿರಿ ಅಮರೇಶ, ಚಿಕ್ಕಯ್ಯ, ಕೊಪ್ಪಲುರಮೇಶ್, ಕುಮಾರ್, ರಾಜೇಶ್, ನವೀನ್, ದೇವರಾಜ್ ಮತ್ತಿತರರಿದ್ದರು.