Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜಸ್ಥಾನ ವಿಧಾನಸಭಾ ಉಪಚುನಾವಣೆ| ಬಿಜೆಪಿಯ ಪ್ರಭಾವಿ ಸಚಿವನನ್ನೇ ಮಣಿಸಿದ ಕಾಂಗ್ರೆಸ್ ಅಭ್ಯರ್ಥಿ !

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಕರಣ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಜನವರಿ 5ರಂದು ನಡೆದಿದ್ದ ಉಪ ಚುನಾವಣೆಯ ಫಲಿತಾಂಶ ನಿನ್ನೆ (ಜ.9) ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ರೂಪೇಂದರ್ ಸಿಂಗ್ ಕೂನರ್ ಜಯ ಗಳಿಸಿದ್ದಾರೆ.

ಕರಣ್‌ಪುರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಗುರುಮೀತ್ ಸಿಂಗ್ ಕೂನರ್ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಅಕಾಲಿಕ ಮರಣ ಹೊಂದಿದ್ದರು. ಇದರಿಂದ ಮುಂದೂಡಲಾಗಿದ್ದ ಚುನಾವಣೆಯನ್ನು ಜನವರಿ 5ರಂದು ನಡೆಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃತ ಗುರುಮೀತ್ ಸಿಂಗ್ ಅವರ ಮಗ ರೂಪೇಂದರ್ ಸಿಂಗ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಸುರೇಂದರ್ ಪಾಲ್ ಸ್ಪರ್ಧಿಸಿದ್ದರು. ನಿನ್ನೆ(ಜ.8) ಫಲಿತಾಂಶ ಪ್ರಕಟಗೊಂಡಾಗ ಕಾಂಗ್ರೆಸ್ ಅಭ್ಯರ್ಥಿ ರೂಪೇಂದರ್ ಸಿಂಗ್ 12,570 ಮತಗಳ ಅಂತರದಿಂದ ಬಿಜೆಪಿ ಸಚಿವರನ್ನು ಸೋಲಿಸಿದ್ದಾರೆ.

ಅಭ್ಯರ್ಥಿಗೆ ಸಚಿವ ಸ್ಥಾನ ಕೊಟ್ಟಿತ್ತು ಬಿಜೆಪಿ ಸರ್ಕಾರ

ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಸುರೇಂದ್ರ ಪಾಲ್‌ ಸಿಂಗ್‌ಗೆ ಮತದಾನದ ಕೆಲವೇ ದಿನಗಳ ಮೊದಲು ಸಚಿವ ಸ್ಥಾನ ಕೊಡಲಾಗಿತ್ತು. ಅಂದರೆ, ಜನವರಿ 5ರಂದು ಮತದಾನವಿತ್ತು, ಡಿಸೆಂಬರ್ 30ರಂದು ಅಭ್ಯರ್ಥಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನ ಕೊಟ್ಟಿತ್ತು. ಇದರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗ ಮೊರೆ ಹೋಗಿದ್ದರೂ, ಏನು ಪ್ರಯೋಜನ ಆಗಿರಲಿಲ್ಲ. ಆದರೆ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಮೂಲಕ ಸರ್ಕಾರಕ್ಕೆ ತೀವ್ರ ಮುಖ ಭಂಗವಾಗಿದೆ.

ಚುನಾವಣೆಗೂ ಮೊದಲೇ ಅಭ್ಯರ್ಥಿಗೆ ಸಚಿವ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್ ಸೇರಿದಂತೆ ಅನೇಕರಿಗೆ ಚುನಾವಣೆಯ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಚುನಾವಣೆಗೂ ಮುನ್ನವೇ ಸಚಿವ ಸ್ಥಾನ ನೀಡುವುದಾದರೆ ಅಭ್ಯರ್ಥಿ ಗೆಲ್ಲುವುದೇ ಖಚಿತವೇ? ಅವರು ಗೆಲ್ಲುತ್ತಾರೆಂದು ಬಿಜೆಪಿಗೆ ಹೇಗೆ ಅಷ್ಟೊಂದು ವಿಶ್ವಾಸ? ಇತ್ಯಾದಿ ಪ್ರಶ್ನೆಗಳು ಮೂಡಿತ್ತು. ಎಲ್ಲದಕ್ಕೂ ಚುನಾವಣೆ ಫಲಿತಾಂಶ ಉತ್ತರ ಕೊಟ್ಟಿದೆ.

ಒಂದು ಸೀಟ್‌ನಿಂದ ಸರ್ಕಾರ ಕಾಂಗ್ರೆಸ್‌ಗೇನು ಲಾಭ?

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ ಸರ್ಕಾರ ರಚಿಸಿದೆ. ಕಳೆದ ಐದು ವರ್ಷ ಆಡಳಿತ ನಡೆಸಿದ್ದ ಬಿಜೆಪಿ ಸೋತಿದೆ. ಹಾಗಿರುವಾಗ ಕೇವಲ ಒಂದು ಸ್ಥಾನ ಗೆಲ್ಲುವ ಮೂಲಕ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಸಾಧ್ಯವೇ? ಇಲ್ಲ ಎಂದು ಗೊತ್ತಿದ್ದರೂ ಒಂದು ಸ್ಥಾನಕ್ಕೆ ಯಾಕಿಷ್ಟು ಪ್ರತಿಷ್ಠೆ ಎಂಬ ಪ್ರಶ್ನೆ ಮೂಡಬಹುದು. ಯಾಕೆಂದರೆ, ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿರುವುದು ಸಾಮಾನ್ಯ ಅಭ್ಯರ್ಥಿಯ ಮುಂದೆಯಲ್ಲ, ಬಲಿಷ್ಠ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವನ ಮುಂದೆಯಾಗಿದೆ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖವಾಗಿದೆ. ಈ ಎಲ್ಲಾ ಕಾರಣಗಳಿಂದ ಕರಣ್‌ಪುರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಸೋತು ಮಂಕಾಗಿದ್ದ ಕಾಂಗ್ರೆಸ್‌ಗೆ ಕರಣ್‌ಪುರ ಗೆಲುವು ಹೊಸ ಉತ್ಸಾಹ ಮೂಡಿಸಿದೆ.

ಉಪಚುನಾವಣೆಯ ಗೆಲುವಿನ ಬಳಿಕ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 115 ಮತ್ತು ಕಾಂಗ್ರೆಸ್ ಶಾಸಕರ ಸಂಖ್ಯೆ 70 ಆಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!