ಮಂಡ್ಯ ಜಿಲ್ಲೆಯಲ್ಲಿ ಮಲ ಹೊರುವ ಮತ್ತು ತೆಗೆಯುವ ವೃತ್ತಿ ಮಾಡುತ್ತಿದ್ದ 850 ಕುಟುಂಬಗಳನ್ನು ಗುರುತಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುನರ್ ವಸತಿ ಯೋಜನೆಯಡಿ ಸವಲತ್ತು ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮ್ಯಾನುಯೆಲ್ ಸ್ಕ್ಯಾವೆಂಜರ್ ಹಾಗೂ ಸಪಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದರು.
ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡಸಿ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ 2016 ರಿಂದ 2020 ರ ವರೆಗೆ ಸರ್ವೆ ನಡೆಸಿ 850 ಕುಟುಂಬಗಳನ್ನು ಗುರುತಿಸಿ ಇವರನ್ನು 2013ರ ಎಂ ಎಸ್ ಕಾಯ್ದೆ ಪ್ರಕಾರ ಫಲಾನುಭವಿಗಳು ಎಂದು ಘೋಷಿಸಲಾಗಿದೆ, ಆದರೆ ಇದುವರೆಗೂ ಯಾವುದೇ ಸವಲತ್ತು ಕಲ್ಪಿಸಿಲ್ಲ ಎಂದು ದೂರಿದರು.
ಸರ್ಕಾರ ಗುರುತಿಸಿರುವ ಮ್ಯಾನುಯೆಲ್ ಸ್ಯಾ ವೆಂಜರ್ ಕುಟುಂಬಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಇವರಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡಬೇಕು, ಇವರ ಮಕ್ಕಳಿಗೆ ನವೋದಯ ವಸತಿ ಶಾಲೆಗಳಲ್ಲಿ ನೇರ ಪ್ರವೇಶ ನೀಡಬೇಕು, ನಿವೇಶನ ರಹಿತರಾಗಿದ್ದಲ್ಲಿ ನಿವೇಶನ ನೀಡಿ ವಸತಿ ನಿರ್ಮಿಸಿ ಕೊಡಬೇಕು, 60 ವರ್ಷ ತುಂಬಿರುವವರಿಗೆ ಕನಿಷ್ಠ 10,000 ಪಿಂಚಣಿ ನೀಡಬೇಕು, 1 ಲಕ್ಷದಿಂದ 15 ಲಕ್ಷದವರೆಗೆ ಸಾಲ ಸೌಲಭ್ಯ ನೀಡಬೇಕು, ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು, ಆರೋಗ್ಯಕರ ನೀಡಬೇಕು ಎಂದು ಒತ್ತಾಯಿಸಿದರು.
ಕದಸಂಸ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಚೆಲುವರಾಜು, ದಿನೇಶ್, ಮಹೇಶ್, ಕರ್ಪ, ಸುಲೋಚನಾ, ಸಂತೋಷ್, ಮಂಜುಳಾ, ನರಸಮ್ಮ ನೇತೃತ್ವ ವಹಿಸಿದ್ದರು.