ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇಂದು ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ಅವರು, ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡಲಾಗುವುದು. ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ 2,000 ರೂ ಜಮಾ ಮಾಡುವ ಗೃಹಲಕ್ಷ್ಮಿ, ಜುಲೈ ಒಂದರಿಂದ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ನೀಡುವ ‘ಅನ್ನಭಾಗ್ಯ’ ಕೊಡಲಾಗುವುದು. ಜೂನ್ 11 ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ವಿವರಣೆ ನೀಡಿದರು. ಘೋಷಿಸಿದ್ದಾರೆ.
ಗೃಹ ಜ್ಯೋತಿ
200 ಯೂನಿಟ್ವರೆಗೆ ಉಚಿತ ವಿದ್ಯುತ್ ಎಲ್ಲರಿಗೂ ಕೊಡುತ್ತೇವೆ. ಇದನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ. 199 ಯೂನಿಟ್ವರೆಗೂ ಫ್ರಿ ವಿದ್ಯುತ್ ಕೊಡುತ್ತೇವೆ. 12 ತಿಂಗಳ ಸರಾಸರಿ ನೋಡುತ್ತೇವೆ. ಅದರ ಮೇಲೆ 10% ಉಚಿತವಾಗಿ ಕೊಡುತ್ತೇವೆ. ಈ ವರ್ಷದ ಜುಲೈ 1 ರಿಂದ ಫ್ರೀ ಜಾರಿಯಾಗುತ್ತದೆ ಎಂದರು. ಆದರೆ ಇದುವರೆಗೂ ಉಳಿಸಿಕೊಂಡಿರುವ ಬಾಕಿಯನ್ನು ಜನರೇ ಕಟ್ಟಬೇಕು ಎಂದರು.
ಗೃಹ ಲಕ್ಷ್ಮೀ
ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತೇವೆ. ಅದಕ್ಕಾಗಿ ಅರ್ಜಿ ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ಸ್ ಕೊಡಬೇಕು. ಮನೆ ಯಜಮಾನಿಗೆ ಎಂದು ಹೇಳಿದ್ದೇವೆ. ಅವರ ಖಾತೆಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ. ಜೂನ್ 15 ರಿಂದ ಜುಲೈ 15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಆಗಸ್ಟ್ 15 ರೊಳಗೆ ಪ್ರಕ್ರಿಯೆ ಮಾಡಿ ಆಗಸ್ಟ್ 15ನೇ ತಾರೀಖು ಎಲ್ಲ ಮನೆಯೊಡತಿಯರ ಖಾತೆಗೆ ಹಣ ಜಮಾ ಮಾಡುತ್ತೇವೆ. ಬಿಪಿಎಲ್ ಮತ್ತು ಎಪಿಎಲ್ ಇಬ್ಬರೂ ಅರ್ಜಿ ಹಾಕಬಹುದು. ಎಲ್ಲರಿಗೂ ಕೊಡುತ್ತೇವೆ ಎಂದರು. ಅರ್ಜಿ ಸಲ್ಲಿಸುವಾಗ ಮನೆಯಲ್ಲಿ ಯಾರು ಯಜಮಾನಿ ಎಂದು ಸ್ಪಷ್ಟಪಡಿಸಬೇಕು ಎಂದರು.
ಇದುವರೆಗೂ ವಿಶೇಷ ಚೇತನರು, ಹಿರಿಯ ವಯಸ್ಸಿನವರು, ವಿಧವಾ ವೇತನ ಪಡೆಯುತ್ತಿರುವವರು ಸಹ ಈ ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದಾರೆ. ಆ ಪಿಂಚಣಿ ಜೊತೆಗೆ ಈ 2,000 ರೂ ಸಹ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅನ್ನಭಾಗ್ಯ ; 10 ಕೆಜಿ ಅಕ್ಕಿ ಉಚಿತ
ಜುಲೈ 1ನೇ ತಾರೀಖಿನಿಂದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ಸದ್ಯ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಮುಂದೆ ಅವರಿಗೂ ತಲಾ 10 ಕೆಜಿ ಕೊಡಲಾಗುವುದು. ಸದ್ಯಕ್ಕೆ ಸ್ಟಾಕ್ ಇಲ್ಲ. ಒಂದು ತಿಂಗಳಲ್ಲಿ ಹೇಗಾದರೂ ಮಾಡಿ ಕೊಂಡುಕೊಂಡು ಜುಲೈ 1 ರಿಂದ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ.
ಶಕ್ತಿ ; ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ
ಸಮಾಜದಲ್ಲಿ 50% ಮಹಿಳೆಯರು ಇದ್ದಾರೆ. ಎಲ್ಲಾ ಮಹಿಳೆಯರಿಗೆ ಅವರ ಆರ್ಥಿಕ ಸ್ಥಾನಮಾನ ಹೊರತು ಪಡಿಸಿ ಎಲ್ಲರಿಗೂ ಉಚಿತ ಬಸ್ ಪ್ರಯಾಣ ಘೋಷಿಸುತ್ತಿದ್ದೇವೆ. ಜೂನ್ 11 ರಂದು ಈ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಯುವ ಶಕ್ತಿ ; ನಿರುದ್ಯೋಗಿ ಪದವೀಧರರಿಗೆ ಭತ್ಯೆ
ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ಸಾವಿರ ರೂ. ನಿರುದ್ಯೋಗ ಭತ್ಯೆ, ಡಿಪ್ಲಮೋ ಮಾಡಿದವರಿಗೆ 1500 ರೂ. ನಿರುದ್ಯೋಗ ಭತ್ಯೆಯನ್ನು 24 ತಿಂಗಳವರೆಗೆ ನೀಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.