ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯನ್ನು ಯಾರೂ ಬೇಕಾದರೂ ಹಾಳು ಮಾಡಬಹುದು. ಯಾಕೆಂದ್ರೆ ಕೋಟೆ ಹಾಳಾದರೆ ಯಾರೂ ಕೇಳೋರಿಲ್ಲ.
ಟಿಪ್ಪು ಸುಲ್ತಾನ್ ಕಾಲದ ಕೋಟೆ ರಕ್ಷಿಸಬೇಕಾದ ಪ್ರಾಚ್ಯ ವಸ್ತು ಇಲಾಖೆ ಏನು ಮಾಡಿದರೂ ಕಂಡೂ ಕಾಣದಂತೆ ಸುಮ್ಮನಿದೆ. ಐತಿಹಾಸಿಕ ಕೋಟೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸವಾಗಿ ಕಲಿಸಬೇಕಾದ ಇಂತಹ ಕೋಟೆ, ಕೊತ್ತಲುಗಳು ನಾಶವಾದರೆ ಧೀರ್ಘಾವಧಿಯ ಇತಿಹಾಸವೇ ಕಣ್ಣ ಮುಂದೆ ನಾಶವಾಗಿ ಬಿಡುತ್ತದೆ.
ಸರಿಯಾದ ನಿರ್ವಹಣೆ ಕಾಣದೆ ಧಾರಾಕಾರ ಮಳೆಯಿಂದ ಈಗಾಗಲೇ ಕುಸಿಯುತ್ತಿರುವ ಶ್ರೀರಂಗಪಟ್ಟಣ ಐತಿಹಾಸಿಕ ಕೋಟೆಯನ್ನು ಪುರಸಭಾ ಸಿಬ್ಬಂದಿಗಳು ಕೂಡಾ ನಿರ್ಲಕ್ಷ್ಯದಿಂದ ಕೆಡವಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಪಟ್ಟಣದ ಪೂರ್ವ ಕೋಟೆಯ ಮಧ್ಯಭಾಗದಲ್ಲಿ ಗುಡಿಸಿ ಸಂಗ್ರಹಿಸಿದ ತ್ಯಾಜ್ಯವನ್ನು ಸಾಗಿಸದೆ ಕೋಟೆಯ ಮೂಲೆಗೆ ಸರಿಸಿ ಬೆಂಕಿ ಹಚ್ಚಿ ಬಿಟ್ಟಿದ್ದಾರೆ.
ಇದರಿಂದ ಕೋಟೆಯ ಚುರುಕಿ ಗಾರೆಯ ಗೋಡೆ ಸುಟ್ಟು ಶಿಥಿಲಗೊಂಡು ಕಳಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಡೆಯ ಬಳಿ ಕಸಕ್ಕೆ ಬೆಂಕಿ ಹಾಕಬಾರದು ಎನ್ನುವ ಸಾಮಾನ್ಯ ಜ್ಞಾನವೂ ಇರದಿರುವುದು ಸರಿಯಲ್ಲ. ಇಲ್ಲಾ ಗೊತ್ತಿದ್ದೂ ಹೀಗೆ ಮಾಡಿದ್ದಾರೆಂದರೆ ಕ್ರಮ ಜರುಗಿಸಬೇಕಿದೆ.
ಐತಿಹಾಸಿಕ ಸ್ಮಾರಕಗಳನ್ನು ಕಾಪಾಡಿಕೊಳ್ಳಬೇಕಾದ ಇಂದಿನ ದಿನಗಳಲ್ಲಿ ಪುರಸಭಾ ಸಿಬ್ಬಂದಿಗಳ ಈ ಕೃತ್ಯಕ್ಕೆ ಸಂಬಂಧಪಟ್ಟ ಪುರಸಭೆ ಮತ್ತು ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸ್ಮಾರಕಗಳಿಗೆ ಧಕ್ಕೆ ಯಾಗದಂತೆ ಕ್ರಮ ವಹಿಸುವುದು ಸೂಕ್ತ ಎಂದು ಪಟ್ಟಣದ ನಾಗರೀಕರ ಮನವಿಯಾಗಿದೆ.