ಮೈಷುಗರ್ ಕಾರ್ಖಾನೆಯ ಸುಮಾರು 350 ನಿವೃತ್ತ ಕಾರ್ಮಿಕರಿಗೆ ನೀಡಬೇಕಾಗಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಹಣವನ್ನು ಅ.8ರೊಳಗೆ ಬಟವಾಡೆ ಮಾಡದಿದ್ದರೆ, ಅ.9ರಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸಲಾಗುವುದೆಂದು ಮೈಷುಗರ್ ನಿವೃತ್ತ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಶಿವಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ನಿವೃತ್ತಿ ಪಡೆದಿರುವ ನಮಗೆ ಇಳಿವಯಸ್ಸಾಗಿದ್ದು, ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ, ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಮಿಕನಿಗೆ 2 ರಿಂದ 3 ಲಕ್ಷ ರೂ.ಗಳ ವೇತನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು, ಇಲ್ಲದಿದ್ದರೆ ಕಾರ್ಖಾನೆ ಮುಂದೆ ಅ.9ರಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸಲು ಮುಂದಾಗುತ್ತೇವೆಂದು ಎಚ್ಚರಿಸಿದರು.
ಮೈಷುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ ಸಾಧ್ಯವಾಗುತ್ತಿಲ್ಲ, ಪ್ರಭಾರ ಎಂ.ಡಿ ಆಗಿರುವ ಎಡಿಸಿ ಡಾ.ಹೆಚ್.ಎಲ್.ನಾಗರಾಜು ಅವರು ಸ್ಪಂದಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ವೀರಭದ್ರಸ್ವಾಮಿ, ಸಹ ಕಾರ್ಯದರ್ಶಿ ಸೂರ್ಯ ನಾರಾಯಣ್, ಮುಖಂಡರಾದ ಎಂ.ಕೆ.ನಾಗೇಶ್ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.