ಸಾರ್ವಜನಿಕ ಶಿಕ್ಷಣ ಇಲಾಖೆಯ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸ್ಟಾಂಫ್ ಪೇಪರ್ (ಛಾಪಾ ಕಾಗದ) ನೀಡುವಂತೆ ಒತ್ತಾಯಿಸಿದ್ದಲ್ಲದೇ, ಕಳೆದ 3 ದಿನಗಳಿಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿ, ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗ್ರಾಮದ ಪ್ರಗತಿ ಕಾನ್ವೆಂಟ್ ನಲ್ಲಿ ನಡೆದಿದೆ.
ಈ ಬಗ್ಗೆ ನುಡಿಕರ್ನಾಟಕ.ಕಾಂ ನೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬರ ಪೋಷಕರು, ಛಾಪಕಾಗದ ನೀಡುವಂತೆ ಕಳೆದ 3 ದಿನಗಳಿಂದ ನಮ್ಮ ಮಕ್ಕಳನ್ನು ಹೊರಗೆ ನಿಲ್ಲಿಸುತ್ತಿದ್ದಾರೆ, ಏಕೆ ಛಾಪಕಾಗದ ನೀಡಬೇಕು ಎಂದು ಪ್ರಶ್ನಿಸಿದರೆ, ಸರಿಯಾದ ಮಾಹಿತಿ ನೀಡುತ್ತಿಲ್ಲ, ನಮ್ಮ ಪಾಂಡವಪುರ ತಾಲ್ಲೂಕಿನಲ್ಲಿ ಯಾವ ಸ್ಕೂಲ್ ನಲ್ಲೂ ಇಂತಹ ರೂಲ್ಸ್ ಇಲ್ಲ, ಈ ಶಾಲೆಯವರು ಮಾತ್ರ ಕೇಳುತ್ತಿದ್ದಾರೆ. ಇಂತಹ ವರ್ತನೆಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಬಿಇಓ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದೇವೆ, ಅವರು ನಾಳೆ ಶಾಲೆಗೆ ಅಧಿಕಾರಿಗಳನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆಂದು ತಿಳಿಸಿದರು.
ಈ ಬಗ್ಗೆ ಬಿಇಓ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಪೋಷಕರು ದೂರವಾಣಿ ಮೂಲಕ ತಿಳಿಸಿದ್ದಾರೆ, ನಾಳೆ ಆ ಶಾಲೆಗೆ ನಮ್ಮ ಅಧಿಕಾರಿಗಳನ್ನು ಕಳಿಸಿಕೊಡುವುದಾಗಿ ಹೇಳಿದ್ದೇನೆ, ಒಂದು ವೇಳೆ ಶಾಲಾ ಆಡಳಿತ ಮಂಡಳಿ ಲೋಪವೆಸಗಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.