ಮಂಗಲ ಟಿ ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ಮಂಡ್ಯದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಆಗಸ್ಟ್ 10 ರಂದು ಅಪರಾಹ್ನ 3.30 ಗಂಟೆಗೆ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಉದ್ಘಾಟನೆ ಟಿ.ತಿಮ್ಮೇಗೌಡ ಜನ ಮುಖಿ ಆಡಳಿತ ಪ್ರಶಸ್ತಿ , ಲಿಂಗಮ್ಮದೊಡ್ಡಿ ತಿಮ್ಮೇಗೌಡ ಕೃಷಿಕ ಪ್ರಶಸ್ತಿ ಹಾಗೂ ಎಂ ಆರ್ ಶಶಿಕಲಾ ಟಿ ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎ ಸಿ ರಮೇಶ್ ತಿಳಿಸಿದರು.
ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಪ್ರಶಸ್ತಿಗೆ ಮಳವಳ್ಳಿ ತಾಲೂಕಿನ ಪ್ರಗತಿಪರ ರೈತ ಎಂ ಎನ್ ಮಹೇಶ್ ಕುಮಾರ್, ವಿದ್ಯಾರ್ಥಿ ಪುರಸ್ಕಾರಕ್ಕೆ ಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಚ್ಎಂ ಅನುಷಾ, ಮಂಗಲ ಸರ್ಕಾರಿ ಪ್ರೌಢಶಾಲೆಯ ಪ್ರಮೋದಿನಿ, ಜನಮುಖಿ ಪ್ರಶಸ್ತಿಗೆ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಹೆಚ್ಎಂ ವೆಂಕಟಪ್ಪ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್ ಲತಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು .
ಅಂದು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರ್ಕಾರದ ವಿಶ್ರಾಂತ ಅಪರ ಮುಖ್ಯ ಕಾರ್ಯದರ್ಶಿ ಡಾ.ಚಿರಂಜೀವಿ ಸಿಂಗ್ ಅವರು ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಡಾ.ಕೆ.ಕುಮಾರ ಅವರು ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜು ಅವರು ಅಭಿನಂದನಾ ನುಡಿಯನ್ನಾಡಲಿದ್ದು, ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಟಿ ತಿಮ್ಮೇಗೌಡ, ಎಂಆರ್ ಶಶಿಕಲಾ ಟಿ ತಿಮ್ಮೇಗೌಡ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಕೃಷ್ಣೇಗೌಡ, ದೇವರಾಜು, ಅರುಣ್ ಕುಮಾರ್, ಸುರೇಶ್, ಶಂಕರೇಗೌಡ ಹಾಗೂ ಮಂಗಲ ಲಂಕೇಶ್ ಉಪಸ್ಥಿತರಿದ್ದರು.