ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ವಳಗೆರೆಮೆಣಸ ಗ್ರಾಮದ ಬಳಿ ಟ್ರಾಕ್ಟರ್ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ರೈತರೊಬ್ಬರಿಗೆ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರೈತ ಮನು ಎಂಬುವರು ವಳಗೆರೆಮೆಣಸ ಗ್ರಾಮದ ಇಂಜಿನಿಯರ್ ಕುಮಾರ್ ಅವರ ಜಮೀನನ್ನು ಟ್ರಾಕ್ಟರ್ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಅನತಿ ದೂರದಲ್ಲಿ ಇರುವ ಇಂಜಿನಿಯರ್ ಕುಮಾರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್.ಪಿ.ಕುಮಾರ್ ಅವರ ಕಬ್ಬಿನ ಗದ್ದೆಯ ಬಳಿ ಚಿರತೆಯೊಂದು ಹಾದು ಹೋಗುತ್ತಿರುವುದು ಕಣ್ಣಿಗೆ ಗೋಚರಿಸಿದೆ.
ಕೂಡಲೇ ಟ್ರಾಕ್ಟರ್ ಚಾಲಕ ಮನು ಭಯದಿಂದಲೇ ಚಿರತೆಯ ಚಲನ-ವಲನವನ್ನು ತನ್ನ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಂಡು ನಂತರ ಭಯದಿಂದಲೇ ಟ್ರಾಕ್ಟರ್ನೊಂದಿಗೆ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ರಾಯಸಮುದ್ರ ಗ್ರಾಮದ ಬಳಿ ಕಬ್ಬುಕಟಾವು ಮಾಡುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ರೈತನಿಗೆ ಗಾಯಗೊಳಿಸಿರುವ ಘಟನೆ ಇನ್ನೂ ಕೂಡ ಹಸಿರಾಗಿರುವಾಗಲೇ ವಳಗೆರೆಮೆಣಸ ಗ್ರಾಮದ ಕಬ್ಬಿನ ಗದ್ದೆಯ ಬಳಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಳಗೆರೆಮೆಣಸ, ಬೊಮ್ಮನಾಯಕನಹಳ್ಳಿ, ಅಗ್ರಹಾರಬಾಚಹಳ್ಳಿ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದರಿಂದ ರೈತರು ಮನೆಯಿಂದ ಜಮೀನಿಗೆ ಹೋಗಲು ಹೆದರಿ ಮನೆಯಲ್ಲಿ ಕುಳಿತಿದ್ದಾರೆ. ಹಾಗಾಗಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೋನಿಟ್ಟು ಕಾರ್ಯಾಚರಣೆ ನಡೆಸಿ ಚಿರತೆ ಸೆರೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ವಳಗೆರೆಮೆಣಸ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.