ಭಾರತ ದೇಶದ ಸಮಗ್ರತೆಗೆ, ಏಕತೆಗೆ ಹಾಗೂ ಅಭಿವೃದ್ಧಿಗಾಗಿ ಪ್ರಾಣತೆತ್ತರವರೂ ಕಾಂಗ್ರೆಸಿನ ಮಹಾತ್ಮಗಾಂಧಿ,ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರೇ ಹೊರತು ಬಿಜೆಪಿಯ ನಾಯಕಲ್ಲ, ಇಂದು ದೇಶವನ್ನು ಒಡೆದು ಆಳುತ್ತಿರುವವರು ಕೋಮುವಾದಿ ಬಿಜೆಪಿ ನಾಯಕರೇ ಹೊರತು ಕಾಂಗ್ರೆಸ್ಸಿನ ನಾಯಕರಲ್ಲ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಪೂರ್ವದಲ್ಲಿ ಹಾಗೂ ಸ್ವತಂತ್ರ ನಂತರದಲ್ಲಿ ದೇಶವನ್ನು ಐಕ್ಯತೆಯಿಂದ ಒಂದುಗೂಡಿಸಿದ ಯಾವುದಾದರೂ ಒಂದು ಪಕ್ಷವಿದ್ದರೇ ಅಂದು ಕಾಂಗ್ರೆಸ್ ಪಕ್ಷ. ಬಿಜೆಪಿಯ ನಾಯಕರು ಹಿಂದು-ಮುಸ್ಲಿಂರ ನಡುವೆ, ಧರ್ಮ-ಧರ್ಮಗಳ ನಡುವೆ ಎತ್ತಿಕಟ್ಟಿ ರಾಜಕಾರಣ ಮಾಡಿಕೊಂಡು ಅಧಿಕಾರಕ್ಕೆ ಬಂದವರು, ಇವರಿಂದ ದೇಶವನ್ನು ಒಂದುಗೂಡಿಸಲು ಸಾಧ್ಯವಿಲ್ಲ ಎಂದರು.
ಗೋವಾ ವಿಮೋಚನೆ ಮಾಡಿದವರೂ ಜವಹರ್ ಲಾಲ್ ನೆಹರು, ಭಾಂಗ್ಲಾ ವಿಮೋಚನೆ ಮಾಡಿದ್ದು ಇಂದಿರಾಗಾಂಧಿ ಹಾಗೂ ಪಾಕಿಸ್ತಾನ ಯುದ್ದ ಗೆದ್ದಿದ್ದು ಲಾಲ್ ಬಹೂದ್ದೂರು ಶಾಸ್ತ್ರಿ ಅವರು ಇವರೆಲ್ಲ ದೇಶ ಕಟ್ಟವಲ್ಲಿ ಯಶಸ್ವಿಯಾಗಿದರು. ಇಂದು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಬಿಜೆಪಿಯ ಯಾವ ನಾಯಕರು ದೇಶಕ್ಕಾಗಿ ಪ್ರಾಣ ನೀಡಿದ್ದಾರೆ ? ಎಂದು ಪ್ರಶ್ನಿಸಿದರು.
ದೇಶ ಮಾರಾಟ ಮಾಡುತ್ತಿರುವ ಬಿಜೆಪಿ
ಬಿಜೆಪಿಯೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಉದ್ಯಮಗಳನ್ನು ಖಾಸಗೀಕರಣ ಬಂಡವಾಳಶಾಹಿಗಳಾದ ಅಂಬಾನಿ, ಅದಾನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ, ಏರ್ ರ್ಪೊರ್ಟ್, ರೈಲ್ವೆ ನಿಲ್ದಾಣ, ಬಂದರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ಧಾರೆ. ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ, ಆದರೆ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿ ಬಡವರ ಮೇಲೆ ಬರೆ ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಂದ್ರದಲ್ಲಿ ಮಿತಿ ಮೀರಿದ ಸಾಲವನ್ನು ಮಾಡಿ, ಇಂದು ಸಾಲಕ್ಕೆ ಬಡ್ಡಿ ಕಟ್ಟುವಂತೆ ಮಾಡಿದೆ, ಬಡವರ ಹಿತಾಸಕ್ತಿಗಳನ್ನು ಕಡೆಗಳಿಸಿ, ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಸರ್ಕಾರವು ಕುಣಿಯುತ್ತಿದೆ ಎಂದು ಕಿಡಿಕಾರಿದರು.
ರಾಹುಕಾಲ ಎಂಬುದು ಪುರೋಹಿತಶಾಹಿಗಳ ಸೃಷ್ಟಿ :
ರಾಹುಕಾಲ, ಯಮಗಂಟಕಾಲ ಎಂಬುದು ಪುರೋಹಿತಶಾಹಿಗಳ ಸೃಷ್ಟಿಯಾಗಿದೆ, ಕಾಂಗ್ರೆಸ್ ಪಕ್ಷಕ್ಕೆ ಇದರ ಮೇಲೆ ನಂಬಿಕೆಯಲ್ಲಿ, ಎಲ್ಲಾ ಕಾಲವು ಒಳ್ಳೇಯದ್ದೆ ಯಾವುದೂ ಕೆಟ್ಟದ್ದೆಂಬುದಿಲ್ಲ, ಕಾಂಗ್ರೆಸ್ ವಿಜ್ಞಾನವನ್ನು ನಂಬುತದೆಯೇ ವಿನಃ ಪುರಾಣವನ್ನಲ್ಲ, ರಾಹುಲ್ ಗಾಂಧಿಯವರ ಐತಿಹಾಸಿಕ ಯಾತ್ರೆಯ ನಂತರ ದೇಶದಲ್ಲಿ ಬಿಜೆಪಿಯ ಅವನತಿ ಕಾಲ ಪ್ರಾರಂಭವಾಗಿದೆ ಎಂದು ಹೇಳಿದರು.