Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗರೇವಕ್ಕರಿಗೆ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ

ಇಂದು ಕರ್ನಾಟಕ ಸಂಘದ ಆಶ್ರಯದಲ್ಲಿ  ಶ್ರೀಮತಿ ಕವಿತಾ ಸ್ವಾರಕ ಉಪನ್ಯಾಸ – 13 ಮತ್ತು ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಮರ್ಥನ ಮಹಿಳಾ ವೇದಿಕೆಯ ಅಧ್ಯಕ್ಷರಾದ  ಶ್ರೀಮತಿ ನಾಗರೇವಕ್ಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಪರಿಚಯ: 

“ಶ್ರೀಮತಿ ನಾಗರೇವಕ್ಕ ಅವರು ಚನ್ನಪಟ್ಟಣದ ದೊಡ್ಡಮಳೂರಿನ ನಾರಾಯಣಗೌಡ, ಎಂ.ಎನ್.ಅಮ್ಮಯ್ಯಮ್ಮ ದಂಪತಿಯ ಸುಮತಿ, ಬೆಳೆದದ್ದು ಅಜ್ಜಿ-ತಾತನ ಮುದ್ದಿನ ಮೊಮ್ಮಗಳಾಗಿ ಮಂಡ್ಯದಲ್ಲಿ, ವಿವಾಹವಾದದ್ದು ತಾವರೆಗೆರೆಯ ಬಿ.ಕೆ.ಮಟ್ಟಸ್ವಾಮಿ ಅವರನ್ನು. ಶ್ರೀಯುತರು ಸಿಡಿಪಿಓ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ. ಶ್ರೀಮತಿ ಅವರು ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ, ಮಹಿಳಾ ಪರ ಹೋರಾಟಗಾರ್ತಿಯಾಗಿ, ಸಂಘಟಕಿಯಾಗಿ, ನಾಡು-ನುಡಿ, ನೆಲ-ಜಲ ಕುರಿತಾದ ಹೋರಾಟಗಾರ್ತಿಯಾಗಿ, ಸಮರ್ಥನ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ, ಮಂಡ್ಯ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಲೈಂಗಿಕ ದೌರ್ಜನ್ಯದಂತಹ ಸ್ತ್ರೀ ಶೋಷಣೆಯ ವಿರುದ್ಧ ವ್ಯಾಪಕವಾಗಿ ದನಿ ಎತ್ತಿದವರು, ಮಹಿಳೆಯರ ಪಾಲಿಕೆ ಮಾರಕವಾಗಿದ್ದ ಆನ್‌ಲೈನ್ ಲಾಟರಿ ವಿರುದ್ಧ ಹೋರಾಟ ಮಾಡಿದ ಹೆಗ್ಗಳಿಕೆ ನಾಗರೇವಕ್ಕ ಅವರದ್ದು. ‘ಬೆಂಕಿಯಲ್ಲಿ ಅರಳಿದ ಹೂವುಗಳು’, ‘ಬುತ್ತಿದೆದೆಯಲ್ಲಿ ಬೆಳದಿಂಗಳು’ ಕೃತಿಗಳನ್ನು ರಚಿಸಿ ಲೇಖಕಿಯಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೀಗೆ ಹಲವು ಆಯಾಮಗಳಲ್ಲಿ ಸಮಾಜಮುಖಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಗತಿಪರ ಚಿಂತಕಿ ನಾಗರೇವಕ್ಕೆ ಅವರ ಸಮಗ್ರ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಮಂಡ್ಯದ ಕರ್ನಾಟಕ ಸಂಘ 2022ನೇ ಸಾಲಿಗೆ ಕೊಡಮಾಡುವ ಕವಿತಾ ಸ್ಮಾರಕ ಪ್ರಶಸ್ತಿಯನ್ನು 15,000 ರೂ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಿತು.”

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗರೇವಕ್ಕ ಈ ದಿನ ಜೀವನದಲ್ಲಿ ಅತ್ಯಂತ ಮುಖ್ಯವಾದ ಮತ್ತು ನೆನಪಿನಲ್ಲಿ ಇಡುವಂತಹ ದಿನ. ನಿಮ್ಮಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಪ್ರೀತಿಪೂರ್ವಕವಾಗಿ ಹೇಳಿದರು.

ರಾಗೌ ಅಂತಹ ವಿದ್ವಾಂಸರ ಮಗಳ ಹೆಸರಿನಲ್ಲಿ ನನಗೆ ಪ್ರಶಸ್ತಿ ಸಿಗುತ್ತಿರುವುದು ನನಗೆ ಯಾವುದೋ ಜನುಮದ ಪುಣ್ಯ ಎಂದು ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.

ಈ ಸಂಘಟನೆಯ ಹೋರಾಟ ನನ್ನಿಂದ  ಮಾತ್ರ ಮಾಡಿದಲ್ಲ, ನನೆಲ್ಲಾ ಸ್ನೇಹಿತರು, ಕುಟುಂಬದವರು ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ನಿರ್ಮಲ ಚಿಕ್ಕೇಗೌಡರು, ಶ್ರೀಲತ, ಪ್ರೇಮಕ್ಕ, ಸುಶೀಲ, ಸುನಂದ ಜಯರಾಂ ರವರು ಎಲ್ಲರೂ ನನಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದರು.

ಸಮಾಜದಲ್ಲಿ, ಸಂಘಟನೆಯಲ್ಲಿ ಕೆಲಸ ಮಾಡಿದಾಗ, ಒತ್ತಡಗಳು ವಿರೋಧಗಳಾದಾಗ ನಮ್ಮ ಜೊತೆಗೆ ಜಿ.ಟಿ.ವೀರಪ್ಪನವರು ಪತ್ರಿಕೆಯಲ್ಲಿ ನಮ್ಮ ಪರವಾಗಿ ಬರೆದು ನಮ್ಮ ಬೆನ್ನುಲುಬಾಗಿ ನಿಂತಿದ್ದವರು. ಈ ಕಾರ್ಯಕ್ರಮದಲ್ಲಿ ಜಿ.ಟಿ. ವೀರಪ್ಪನವರಿರುವುದು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಹೋರಾಟಕ್ಕೆ ಜೊತೆಯಲ್ಲಿ ನಿಂತು ನಮ್ಮೊಂದಿಗೆ ಇದ್ದವರು ಹೊನ್ನಪ್ಪನವರು, ಶಂಕರೇಗೌಡರ ಮಗ ಸಚ್ಚಿದಾನಂದರವರು ಕೂಡ ಇದ್ದರು. ನಮ್ಮ ಹೋರಾಟಕ್ಕೆ ಅನೇಕ ದಾನಿಗಳಿದ್ದರು. ಇದು ಪ್ರಾಮಾಣಿಕ ಕೆಲಸಕ್ಕೆ ಅವರು ಗೌರವದಿಂದ ಇದ್ದದ್ದು ಕಾರಣ ಎಂದು ಹೇಳಿದರು.

ನನ್ನ ಎರಡು ಪುಸ್ತಕ ಬರೆಯಲು ಕಾರಣ ಕರ್ತರಾದ ಲಿಂಗಣ್ಣ ಬಂಧೂಕಾರ್ ರವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸಮರ್ಥನ ಸಂಘಟನೆಯ ಮಂಜುಳಾ ಉದಯ ಶಂಕರ್, ಶಮಂತಕ್ಕ ಲಲಿತ ಅವರು ಸೇರಿದಂತೆ ತುಂಬಾ ಹೆಣ್ಣು ಮಕ್ಕಳು ಸೇರಿಕೊಂಡು ನಾವು ಕಾರ್ಯಕ್ರಮ ಮಾಡುತ್ತಿದ್ದೇವು.  ಈ ದಿನ ನನಗೆ ಸಿಕ್ಕಿರುವ ಪ್ರಶಸ್ತಿಯು ಎಲ್ಲರಿಗೂ ಸೇರುವಂತಹದ್ದು. ಎಲ್ಲರೂ ಜೊತೆಯಲ್ಲಿ ಇರದಿದ್ದರೆ ನಾನ್ನೊಬ್ಬಳಿಂದ ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಹೆಣ್ಣು ಮಗಳು ಸಮಾಜದಲ್ಲಿ ಕೆಲಸ ಮಾಡಬೇಕಾದರೆ, ಕುಟುಂಬದ ಸಮಾಜದ ನೆರವು ಅತ್ಯಗತ್ಯ ಎಂದು ತಿಳಿಸಿದರು.

ಕರ್ನಾಟಕ ಸಂಘದಲ್ಲಿ ಮಹಿಳಾ ಸಂಘಟನೆ ಕಮಿಟಿಯನ್ನು ಮಾಡಿಕೊಂಡಿದ್ದೇವೆ. ಇಂದು ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದೀರಿ ಮತ್ತು 15000 ನಗದು ನೀಡಿದ್ದೀರಿ. ನಾನು ಈ ಹಣವನ್ನು ನಮ್ಮ ಮಹಿಳಾ ಸಂಘಟನೆಯ  ಕಮಿಟಿಗೆ ಹಣವನ್ನು ಮಹಿಳಾ ವಿಚಾರಗಳ ಹೋರಾಟಕ್ಕೆ ಮೀಸಲಿಡಲು ನೀಡುತ್ತೇನೆ ಎಂದು ತಿಳಿಸಿದರು.

ಇಂದಿನಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ. ಸ್ಪಂದನಾ ಸಂಘಟನೆಯ ರೀತಿಯಲ್ಲೆ ನಾವೆಲ್ಲಾ ಒಂದೇ ಎನ್ನುವ ಮನೋಭಾವದಲ್ಲಿ ಕೆಲಸ ಮಾಡಿಕೊಂಡು ಸಾಗೋಣ. ನನ್ನನ್ನು ಈ ಕಾರ್ಯಕ್ರಮಕ್ಕೆ ಬಂದು ಅಭಿನಂದಿಸಿರುವವರನ್ನು ಗೌರವಿಸುತ್ತಾ ನನಗೆ ಇಷ್ಟು ಅವಕಾಶ ಮಾಡಿಕೊಟ್ಟ ಈ ವೇದಿಕೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಪ್ರೊ.ಬಿ.ಜಯಪ್ರಕಾಶ್ ಗೌಡರವರು ಶ್ರೀಮತಿ ಕವಿತಾ ಸ್ಮಾರಕ ಉಪನ್ಯಾಸ ಮತ್ತು ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನವು ನಡೆದು ಬಂದ ಹಾದಿಯನ್ನು ತಿಳಿಸಿದರು.

ಪ್ರೊ.ಹೆಚ್.ಎಸ್. ಮುದ್ದೇಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ. ಹರೀಶ್ ಕುಮಾರ್ ನಿರೂಪಣೆಯನ್ನು ಮಾಡಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳ ಮಾನಸರವರು  ಮಹಿಳೆ ಮತ್ತು ಕಾನೂನಿನ ಪುಸ್ತಕದ  ಬಗೆಗೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ರಾಗೌ ದಂಪತಿಗಳು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರೈತ ಸಂಘದ ನಂದಿನಿ ಜಯರಾಮ್ ವಹಿಸಿದ್ದರು,   ಸಹ ಪ್ರಾಧ್ಯಾಪಕರಾದ  ಡಾ. ಕೆಂಪಮ್ಮ ಕಾರ್ಕಹಳ್ಳಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಕುರಿತು : ಪ್ರೊ. ಬಿ. ಜಯಪ್ರಕಾಶ್ ಗೌಡ

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!