ಕಾರ್ತಿಕ ಮಾಸದ ದೀಪಾರಾಧನೆಯ ಬೆಳಕಿನತ್ತ ನಾಗರಂಗದ ನಾಟಕೋತ್ಸವದ ರಂಗು, ರಂಗ ಅಭಿಮಾನಿಗಳಿಗೆ ಅಭಿನಯದ ರಂಗನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದೆ.
ಕನ್ನಡ ಸಂಘವು ಪ್ರತಿ ವರ್ಷದಂತೆ ನಾಗರಂಗೋತ್ಸವ ನಡೆಯುತ್ತಿದ್ದು, ಕೋವಿಡ್ ನಿಂದಾಗಿ ಸ್ಥಗಿತವಾಗಿದ್ದ ಎಲ್ಲಾ ಚಟುವಟಿಕೆಗಳಿಗೆ ಮತ್ತೇ ಚಾಲನೆ ಸಿಕ್ಕಿದೆ. ಈ ಬಾರಿ ಸಾಂಸ್ಕೃತಿಕ ರಂಗೂ ನೀಡಲು ನಾಗರಂಗ ಸಜ್ಜುಗೊಂಡಿದೆ. ಕನ್ನಡ ಸಂಘದ ಐವತ್ತನೇ ವರ್ಷದ ಸಂಭ್ರಮ ಈ ಭಾರಿ ವಿಶೇಷವಾಗಿದೆ.
ಕಲಾ ಪರಂಪರೆ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದ ಹಲವಾರು ಸಾಹಿತ್ಯದ ಕಮ್ಮಟಗಳನ್ನು ಕನ್ನಡ ಸಂಘವು ತನ್ನದೇ ಆದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಗುತ್ತಾ ವರ್ಷಕ್ಕೊಮ್ಮೆ, ರಂಗಾಭಿಮಾನಿಗಳಿಗೆ ರಂಗ ಹಬ್ಬದ ಔತಣಕೂಟ ನೀಡುವ ರಾಜ್ಯಮಟ್ಟದ ನಾಟಕೋತ್ಸವಗಳು ನಡೆಸುತ್ತಾ ಬಂದಿದೆ.
ಕೇವಲ ರಂಗಭೂಮಿಗೆ ಸೀಮಿತವಲ್ಲದೆ ನಾಟಕೋತ್ಸವ ಸುತ್ತಮುತ್ತ ಸಾಹಿತ್ಯ ಪ್ರಕಾರಗಳ ವಿವಿಧ ಮಜಲುಗಳು, ಸಾಹಿತ್ಯ ಅಭಿಮಾನಿಗಳನ್ನ ಸೆಳೆಯುವ, ದೊಡ್ಡವರಿಂದ ಚಿಕ್ಕವರನ್ನು ಸೆಳೆಯುವ ಪುಸ್ತಕದ ಅಂಗಡಿಗಳು, ಬಟ್ಟೆ, ಇನ್ನಿತರ ಅಂಗಡಿ ಮುಂಗ್ಗಟ್ಟುಗಳು ಹಾಗೂ ಬಾಯಿ ಚಪಲ ತಣಿಸುವ ಜೋಳದ ರೊಟ್ಟಿ ಮುಂತಾದ ತಿನಿಸುಗಳ ಮಳಿಗೆಗಳನ್ನು ತೆರೆಯಲಿದೆ.
ಈ ಬಾರಿ ಕನ್ನಡ ಸಂಘವು ಐವತ್ತು ವರ್ಷಗಳ ಸುವರ್ಣ ಸಂಭ್ರಮದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವವನ್ನು ನ.22 ರಿಂದ 28 ರ ವರೆಗೆ ರಾಜ್ಯದ ವಿವಿಧ ಭಾಗಗಳ ಕಲಾತಂಡಗಳಿಂದ ರಂಗಾಭಿನಯಗಳ ನಾಟಕಗಳು ನಾಗಮಂಗಲದಲ್ಲಿ ನಡೆಯಲಿವೆ.