ಜಗತ್ತಿನಲ್ಲಿ ಎಲ್ಲವನ್ನು ಕೃತಕವಾಗಿ ಅಥವಾ ಬದಲಿಯಾಗಿ ತಯಾರಿಸಿಕೊಳ್ಳಬಹುದು ಆದರೆ ರಕ್ತ ಹಾಗೂ ತಾಯಿಯ ಎದೆ ಹಾಲನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದರು.
ಮಂಡ್ಯದ ಅರುವಿ ಟ್ರಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಲ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಡ್ಯ ವೃತ್ತ, ಗ್ರಾಮ ಪಂಚಾಯಿತಿ ಮಂಗಲ ಇವರ ಸಹಯೋಗದಲ್ಲಿ ಮಂಗಲ ಗ್ರಾಮದಲ್ಲಿ ‘ವಿಶ್ವ ಸ್ತನ್ಯಪಾನ ಸಪ್ತಾಹ 2024’ ಅಂಗವಾಗಿ ಆಯೋಜಿಸಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಮಗುವಿಗೆ ಹಾಲುಣಿಸುವುದು ಪ್ರತಿ ತಾಯಂದಿರ ಸಹಜ ಕ್ರಮವಾದರೂ ಮಕ್ಕಳಿಗೆ ಹಾಲುಣಿಸುವ ಬಗ್ಗೆ ಸಪ್ತಾಹಗಳನ್ನು ಆಚರಿಸಿ ತಿಳಿವಳಿಕೆ ನೀಡುವ ತನಕ ಬಂದು ನಾವು ನಿಂತಿದ್ದೇವೆ ಎಂದರೆ ಇದೊಂದು ವಿಷಾದನೀಯ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ವೇಣುಗೋಪಾಲ್ ಮಾತನಾಡಿ, ಮಕ್ಕಳಿಗೆ ಬರುವ 13 ಮಾರಕ ರೋಗಗಳನ್ನು ತಡೆಗಟ್ಟಲು ತಾಯಿಯ ಎದೆಹಾಲು ತುಂಬಾ ಮಹತ್ವಪೂರ್ಣದ್ದಾಗಿದೆ, ಈ ಬಗ್ಗೆ ಗ್ರಾಮೀಣ ಹಾಗೂ ನಗರ ವಲಯಗಳಲ್ಲಿ ಇರುವ ಎಲ್ಲಾ ತಾಯಂದಿರು ಕೂಡ ಕಡ್ಡಾಯವಾಗಿ ಆರು ತಿಂಗಳವರೆಗೆ ಯಾವುದೇ ದ್ರವವನ್ನು ನೀಡದೆ ತಾಯಿಯ ಎದೆಹಾಲನ್ನು ಮಾತ್ರ ಮಕ್ಕಳಿಗೆ ನೀಡಬೇಕು. ಇದರಿಂದ ತಾಯಿ ಮಗುವಿನ ಬಾಂಧವ್ಯ ಚೆನ್ನಾಗಿರುತ್ತದೆ, ತಾಯಿ ಮತ್ತು ಮಗುವಿಗೆ ಇದರಿಂದ ಹತ್ತಾರು ಅನುಕೂಲಗಳು ಆಗಲಿವೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತಡೆಯಲು ತಾಯಿಯ ಎದೆ ಹಾಲು ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕರಾದ ಲಕ್ಷ್ಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಅತಿ ಹೆಚ್ಚು ಮೊಬೈಲ್ ಗಳನ್ನು ಬಳಸುತ್ತಿರುವುದರಿಂದ ತಾಯಿ ಮತ್ತು ಮಕ್ಕಳಲ್ಲಿ ಅನೇಕ ಸೂಕ್ಷ್ಮ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ತಾಯಂದಿರಲ್ಲಿ ಎದೆಹಾಲಿನ ಕೊರತೆ ಉಂಟಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಇದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರು, ಇದರ ಪ್ರಮಾಣ ಜಾಸ್ತಿಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ಅರುವಿ ಟ್ರಸ್ಟ್ ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತಸದ ಸಂಗತಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುವಿ ಟ್ರಸ್ಟ್ ನ ಮುಖ್ಯಸ್ಥರಾದ ಅರುಣ ಈಶ್ವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಫ್ಲೋರೋಸಿಸ್ ಅಧಿಕಾರಿ ಡಾ.ದಿವಾಕರ್, ಮಂಡ್ಯ ತಾಲೂಕು ಪೋಷಣ ಅಭಿಯಾನ ಸಂಯೋಜಕ ವಿನುತಾ, ಆಶಾ ಸಮುದಾಯ ಆರೋಗ್ಯ ಅಧಿಕಾರಿ ಕೃಷ್ಣವೇಣಿ, ರವೀಂದ್ರ, ಎಚ್ ಪಿ ವೈರಮುಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ವಿಶೇಷವಾಗಿ ಗರ್ಭಿಣಿ ಬಾಣಂತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.