ಸರ್ಕಾರ ನೀಡುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿದ ತೃಪ್ತಿ ನನಗಿದೆ ಎಂದು ವರ್ಗಾವಣೆಗೊಂಡ ದುದ್ದ ಭಾಗದ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎನ್.ಯೋಗೇಶ್ ಹೇಳಿದರು.
ಮಂಡ್ಯ ನಗರದ ಕಲಾಮಂದಿರದಲ್ಲಿ ತಾಲೂಕಿನ ದುದ್ದ ಹೋಬಳಿಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಚೇರಿ ಸಿಬ್ಬಂದಿಗಳು ಆಯೋಜಿಸಿದ್ದ ಬೀಳ್ಕೋಡುಗೆ ಸಮಾರಂಭದಲ್ಲಿ ದುದ್ದ ಭಾಗದ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಂಡ್ಯ ತಾಲೂಕಿನ ದುದ್ದ ಹೋಬಳಿ ಭಾಗದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳನ್ನು ಇಲಾಖಾ ಸಿಬ್ಬಂದಿಗೊಂದಿಗೆ ಸಮರ್ಪಕವಾಗಿ ತಲುಪಿಸಲಾಗಿದೆ, ಸರ್ಕಾರಿ ಸೇವೆಯಲ್ಲಿರುವವರಿಗೆ ಒತ್ತಡದ ಕೆಲಸ ಇದ್ದೆ ಇರುತ್ತದೆ, ಆದರೆ ತಾಳ್ಮೆ ಮತ್ತು ಸಹಕಾರ, ಸೌಹಾರ್ದತೆಯಿಂದ ಕಾರ್ಯ ನಿಭಾಯಿಸಿದರೆ ಶ್ರೇಯಸ್ಸು ಲಭಿಸುತ್ತದೆ ಎಂದು ನುಡಿದರು.
ದುದ್ದ ಭಾಗದಲ್ಲಿ 3 ವರ್ಷಗಳ ಸೇವೆ ಸಲ್ಲಿಸಿದ್ದೇನೆ, ಮೊದಲು ಕಚೇರಿ ಮತ್ತು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲನೇ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ? ಎನ್ನುವ ಕಳವಳ ನನ್ನಲ್ಲಿ ಇತ್ತು, ಆದರೆ ಈಗ ಅದು ಇಲ್ಲದಾಗಿದೆ, ಇದಕ್ಕೆ ಸಿಬ್ಬಂದಿಗಳ ಸಹಕಾರ ಮತ್ತು ಆಡಳಿತ ನಿರ್ವಾಹಣೆಯಲ್ಲಿನ ಸಹಭಾಗಿತ್ವ ಕಾರಣವಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲೂಕಿನ ಸಿಡಿಪಿಓ ಅರುಣ್ಕುಮಾರ್, ಶ್ರಿರಂಗಪಟ್ಟಣ ತಾಲೂಕಿನ ಸಿಡಿಪಿಓ ಅಶೋಕ್, ಅಜೀಂ ಪ್ರೇಮ್ ಜೀ ಫೌಂಡೇಶನ್ ರವಿಕುಮಾರ್, ಸಿಡಿಪಿಓ ಕಚೇರಿಯ ರವಿ, ಮೇಲ್ವಿಚಾರಕಿಯರಾದ ಸಮಿಮ್ತಾಜ್, ಚಂಪಕುಮಾರಿ, ಅನಸೂಯ ರಾಣಿ, ವಸಂತಾ, ವರದಮ್ಮ, ರಂಜನಿ, ಪ್ರಜ್ವಲ್. ಸಂಪನ್ಮೂಲ ವ್ಯಕ್ತಿ ಕೆ.ಪಿ.ಅರುಣಕುಮಾರಿ ಮತ್ತಿತರರಿದ್ದರು.