ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಹುಟ್ಟುಹಬ್ಬ ಆಚರಣೆಗೆ ಸರ್ಕಾರ ನಿಷೇಧಾಜ್ಞೆ ಘೋಷಿಸಿದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಸೇರಿದಂತೆ ಗಣ್ಯರು, ಶ್ರೀರಂಗಪಟ್ಟಣದ ಗುಂಬಜ್ ನಲ್ಲಿರುವ ಟಿಪ್ಪು ಸಮಾಧಿಗೆ ಹೂಗುಚ್ಚಗಳನ್ನು ಅರ್ಪಿಸಿ ನಮನ ಸಲ್ಲಿಸಿದರು.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಅವರು, ಇಂದು ಟಿಪ್ಪು ಸುಲ್ತಾನ್ರ 273ನೇ ಜನ್ಮದಿನದ ಆಚರಣೆ ಮಾಡ್ತಾ ಇದೀವಿ. ಈ ಹಿಂದೆಯಿಂದಲೂ ಟಿಪ್ಪು ಸುಲ್ತಾನ್ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ. ವಿಶ್ವ ಶಾಂತಿಗಾಗಿ ಈ ಆಚರಣೆ ಮಾಡ್ತಾ ಇದೀವಿ. ಅನೇಕರಿಗೆ ಈ ಜಯಂತಿ ಆಚರಣೆ ಹೇಗೆ ಮಾಡ್ತಾ ಇದೀವಿ ಅಂತಾ ಗೊತ್ತಿಲ್ಲ. ಇದರಿಂದ ಅನೇಕ ಗೊಂದಲಗಳಿಗೆ ನಾವುಗಳು ಕಾರಣವಾಗಿದೆ ಎಂದರು.
2016ರಲ್ಲಿ ಸರ್ಕಾರ ಟಿಪ್ಪು ಜಯಂತಿ ಮಾಡುವ ಆದೇಶ ಮಾಡಿತು. ಇದಾದನಂತರ ಸಾಕಷ್ಟು ವೈಮನಸ್ಸು ಹಾಗೂ ವ್ಯತ್ಯಾಸಗಳು ಆಗಿವೆ. ನಮ್ಮ ಜನಾಂಗದಿಂದ ಸರ್ಕಾರ ಟಿಪ್ಪು ಜಯಂತಿ ಮಾಡಬೇಕು ಅಂತಾ ಕೇಳಿಲ್ಲ.
ಸರ್ಕಾರ ಅನೇಕ ಮಹನೀಯರ ಜಯಂತಿಯ ಜೊತೆ ಟಿಪ್ಪು ಜಯಂತಿ ಮಾಡುವುದನ್ನು ನಾವು ಸ್ವಾಗತಿಸಿದ್ದೇವೆ, ಇದಾದ ನಂತರ ಸರ್ಕಾರ ಜಯಂತಿ ನಿಲ್ಲಿಸಿದ್ದನ್ನು ನಾವು ಸ್ವಾಗತ ಮಾಡಿದ್ದೇವೆ. ನಮ್ಮ ಕಾರ್ಯ ಮಾಡಿಕೊಳ್ಳಲು ನಮಗೆ ಸಾಮರ್ಥ್ಯ ಇದೆ. ನಮ್ಮ ಆಚರಣೆಯಲ್ಲಿ ಬೇರೆ ವಿಧಿವಿಧಾನಗಳು ಇಲ್ಲ.
ಹೂ ಅರ್ಪಿಸಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡುವುದೇ ಟಿಪ್ಪು ಜಯಂತಿ ಆಚರಣೆಯಾಗಿದೆ ಎಂದರು.
ಇತಿಹಾಸದ ಪುಟಗಳನ್ನು ತಿರುಚುವಂತವರಿಗೆ ಇತಿಹಾಸ ಸಾರುವ ಕೆಲಸ ಮಾಡುತ್ತಿದ್ದೇವೆ. ಟಿಪ್ಪು ಸುಲ್ತಾನ್ ಸಾಧನೆಗಳನ್ನು ಸಾರಿ, ನಾವು ಎಲ್ಲರಿಗಿಂತಲೂ ಶ್ರೇಷ್ಠ ಅಂತಾ ಹೇಳ್ತಾ ಇಲ್ಲ. ಟಿಪ್ಪು ಜಯಂತಿಯನ್ನು ರಾಜಕೀಯ ವಸ್ತು ಮಾಡಿಕೊಂಡು ಜನರ ಮನಸ್ಸನ್ನು ಕೆಡಿಸುವ ಪ್ರಯತ್ನವನ್ನು ಕೆಲವರು ಮಾಡ್ತಿದ್ದಾರೆ. ನಾವು ಶಾಂತಿಯನ್ನು ಬಿಟ್ಟುಕೊಟ್ಟವರಲ್ಲ, ನಾವು ಶಾಂತಿ ಪ್ರಿಯರು. ರಾಜಕೀಯ ಮಾಡುವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇಂತಹ ವಿಚಾರಗಳಿಗೆ ರಾಜಕೀಯ ಮಾಡೋದು ಬೇಡಾ, ಅನೇಕ ವಿಚಾರಗಳು ಇವೆ ಅದರಲ್ಲಿ ರಾಜಕೀಯ ಮಾಡೋಣಾ ಎಂದು ಕಿವಿಮಾತು ಹೇಳಿದರು.
44 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಆದೇಶ
ಟಿಪ್ಪು ಜಯಂತಿ ಆಚರಣೆಗೆ ಚಿಂತನೆ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ,
144 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರು. ಟಿಪ್ಪುವಕ್ಫ್ ಎಸ್ಟೇಟ್ ನಿಂದ ಟಿಪ್ಪು ಜಯಂತಿ ನಡೆಸಲು ಸಿದ್ದತೆ ನಡೆದಿದ್ದು, ಮೈಸೂರು ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆ ಇತ್ತು, ಶ್ರೀರಂಗಪಟ್ಟಣವು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸರ್ಕಾರ ನಿರ್ಬಂಧ ಹೇರಿತ್ತು.
ನಿಷೇಧಾಜ್ಞೆಯಂತೆ ಮೆರವಣಿಗೆ, ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ, ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧ, ಘೋಷಣೆ ಕೂಗದಂತೆ, ಪ್ರಜೋದನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಶ್ರೀರಂಗಪಟ್ಟಣ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದರು.