ವರದಿ : ಪ್ರಭು ವಿ.ಎಸ್.
ಮದ್ದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಕೆ.ಟಿ. ಶ್ರೀಕಂಠೇಗೌಡರು ವಿಧಾನ ಪರಿಷತ್ ಸದಸ್ಯ ಸ್ಥಾನ ಅಲಂಕರಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಆಯೋಜಿಸಿದ್ದ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಕೆ.ಟಿ. ಶ್ರೀಕಂಠೇಗೌಡರ ಅಭಿನಂದನಾ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.
ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದ್ದು ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಕೆ.ಟಿ. ಶ್ರೀಕಂಠೇಗೌಡ ಅವರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯವೆಂದರು.
ತಾವಿಬ್ಬರು ಬೇರೆ ಬೇರೆ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಕೆ.ಟಿ. ಶ್ರೀಕಂಠೇಗೌಡರ ಸಲಹೆ ಸೂಚನೆಗಳನ್ನು ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುವುದಾಗಿ ವಿಧಾನ ಪರಿಷತ್ ಶಾಸಕರಾಗಿ ಪದವೀಧರರು ಮತ್ತು ಉಪನ್ಯಾಸಕರ ಹಲವು ಬೇಡಿಕೆಗೆ ಈಡೇರಿಕೆಗೆ ಸದನದಲ್ಲಿ ಬಾವಿಗಿಳಿದು ಹೋರಾಟ ನಡೆಸಿದ ಕೀರ್ತಿ ಶ್ರೀಕಂಠೇಗೌಡರಿಗೆ ಸಲ್ಲುತ್ತದೆಂದರು.
ನಾಲ್ಕು ಜಿಲ್ಲೆಗಳ ಪ್ರತಿನಿಧಿಯಾಗಿ ಸದನದಲ್ಲಿ ಚರ್ಚೆ ಮಾಡುವ ಮೂಲಕ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಲು ತಾವುಗಳೇ ಕಾರಣವಾಗಿದ್ದು ಹೆಚ್ಚಿನ ಸಮಯವಕಾಶ, ದಾಖಲೆ ಹಾಗೂ ಅಂಕಿ ಅಂಶಗಳೊಟ್ಟಿಗೆ ಸದನದಲ್ಲಿ ಚರ್ಚಿಸಿ ಸಮರ್ಪಕ ಉತ್ತರ ಪಡೆಯುತ್ತಿದುದ್ದಾಗಿ ತಿಳಿಸಿದರು.
ಸ್ಥಳೀಯ ಸಂಘ, ಸಂಸ್ಥೆಗಳು ಸೇರಿದಂತೆ ತವರಿನ ಸನ್ಮಾನ ಸ್ವೀಕರಿಸುತ್ತಿರುವುದು ತಮಗೆ ಅತೀವ ಸಂತಸವನ್ನುಂಟು ಮಾಡಿದ್ದು ಮುಂದಿನ ದಿನಗಳಲ್ಲೂ ಪದವೀಧರರ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ಹೇಳಿದರು.
ಮಂಡ್ಯ ಶಂಕರೇಗೌಡ ಶಿಕ್ಷಣ ಮಹಾವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ. ಶಂಕರೇಗೌಡ ಸನ್ಮಾನಿತರನ್ನು ಕುರಿತು ಪ್ರಧಾನ ಭಾಷಣ ನಡೆಸಿಕೊಟ್ಟರು.
ಸಾಹಿತಿ ತೈಲೂರು ವೆಂಕಟಕೃಷ್ಣ ರವರು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿರುವ ಕೆ.ಟಿ. ಶ್ರೀಕಂಠೇಗೌಡ ಅವರನ್ನು ಅಭಿನಂದಿಸಿ ಗೌರವಿಸಿದರಲ್ಲದೇ ನಾಡ ಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ದೇಶಹಳ್ಳಿ ಪಿ. ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಜಿ.ಪಂ. ಮಾಜಿ ಸದಸ್ಯ ಬಿ. ಬಸವರಾಜು, ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾಶಂಕರೇಗೌಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಸಿ. ರವಿಕುಮಾರ್, ಮುಖಂಡರಾದ ಕೆ.ಟಿ. ರಾಜಣ್ಣ, ಕೆ.ಟಿ. ಶಿವರಾಮು, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ. ಪಿ. ಕೃಷ್ಣ, ಕಾರ್ಯದರ್ಶಿ ಸಿ. ಸುರೇಶ್, ಪದಾಧಿಕಾರಿಗಳಾದ ವಿ.ಟಿ. ರವಿಕುಮಾರ್, ಶಂಕರಯ್ಯ, ಜಿ.ಸಿ. ಮಹೇಶ್, ಎ. ದೊರೆಸ್ವಾಮಿ, ಮಾರಸಿಂಗನಹಳ್ಳಿ ರಾಮಚಂದ್ರು, ಎಚ್.ಕೆ. ವರಲಕ್ಷಿ, ರಾಮರಾಜು, ತಿಪ್ಪೂರು ರಾಜೇಶ್ ಇತ್ತರರಿದ್ದರು.