ಕೃಷಿಕರು ಬೇಸಾಯಕ್ಕೆ ಬಳಸುವ ಶೇ.75ರಷ್ಟು ಖರ್ಚು ಸಿಗದಂತಹ ವಾತಾವರಣ ಈಗಿನ ಬೆಲೆ ನೀತಿಯಲ್ಲಿದೆ, ಈ ಸಂಬಂಧ ಬೆಳೆಗಾರರ ರಕ್ಷಣೆಗಾಗಿ 11 ಸಾವಿರ ಕೋಟಿ ರೂ.ಗಳ ಅವರ್ತನಿಧಿ ಸ್ಥಾಪಿಸಿದರೆ 23 ಬೆಳೆಗಳಿಗೆ ಎಂಎಸ್’ಪಿ ಬೆಲೆ ನೀಡಬಹುದಾಗಿದ್ದು, ಆವರ್ತನಿಧಿಯ ಕ್ರೋಡೀಕರಣದ ಬಗ್ಗೆ ಸರ್ಕಾರ ಪ್ರಯತ್ನ ನಡೆಸಬೇಕೆಂದು ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.10ರಂದು ಬೆಂಗಳೂರಿನಲ್ಲಿ ಕೃಷಿ ಹಕ್ಕೊತ್ತಾಯಗಳ ಕೈಪಿಡಿ ಬಿಡುಗಡೆಗೊಳಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಆಯವ್ಯಯದ ಮೇಲೆ ಬಡವರು ಸೇರಿದಂತೆ ಹಲವು ಸಮುದಾಯಗಳು ನಿರೀಕ್ಷೆ ಇಟ್ಟಿವೆ, ಕೃಷಿ ಸಮುದಾಯದ ಬಲವರ್ಧನೆಗೆ ಅಲ್ಪಕಾಲಿನ, ಮಧ್ಯಕಾಲಿನ ಹಾಗೂ ಧೀರ್ಘಕಾಲಿನ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಮಾಹಿತಿ ನೀಡಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಂಡಿಸಲಿರುವ ಆಯವ್ಯಯದಲ್ಲಿ ನಾಡಿನ ಅನ್ನದಾತರಾಗಿರುವ ರೈತರಿಗೆ ನೆರವಾಗುವ ಹಕ್ಕೊತ್ತಾಯಗಳ ಕುರಿತು ಕೃಷಿಯಲ್ಲಿ ‘ಕರ್ನಾಟಕ ಮಾದರಿ’ ಎಂಬ ರೈತ ಸಮುದಾಯ ಹಕ್ಕೊತ್ತಾಯಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಕೃಷಿ ತಜ್ಞ ಡಾ.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಆದರೆ ಅವರ ವರದಿಯನ್ನು ಅನುಷ್ಟಾನಕ್ಕೆ ತರದಿರುವುದು ಬೇಸರದ ಸಂಗತಿ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ರೈತರ ಮಕ್ಕಳನ್ನು ಮದುವೆಯಾಗವವರಿಗೆ ₹ 5 ಲಕ್ಷ ಪ್ರೋತ್ಸಾಹ ಧನ ನೀಡಿ
ಪ್ರಸ್ತುತ ಸಂದರ್ಭದಲ್ಲಿ ರೈತರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಸಿಗದಂತಹ ಪರಿಸ್ಥಿತಿ ಉಂಟಾಗಿದೆ, ಆದ್ದರಿಂದ ರೈತ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಸಹಾಯಧನ ನೀಡುವಂತಹ ಯೋಜನೆಯನ್ನು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗಿದೆ ಎಂದರು.
ಎ.ಎಲ್.ಕೆಂಪೂಗೌಡ ಮಾತನಾಡಿ, ಮಳೆಯ ಅಭಾವದಿಂದ ಪ್ರಸ್ತುತ ರೈತರಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅರಿವು ಉಂಟಾಗಿದೆ, ರೈತರನ್ನು ರಕ್ಷಿಸುವ ಕೆಲಸಕ್ಕೆ ಆಳುವ ಸರ್ಕಾರಗಳು ಮುಂದಾಗಬೇಕೆಂದರು.
ತುಮಕೂರು ಜಿಲ್ಲೆಯ ಶಿರಾ, ಕೊಟ್ಟರು, ಚಳ್ಳಕೆರೆ ತಾಲ್ಲೂಕುಗಳ ವ್ಯಾಪ್ತಿಯ 26 ಹಳ್ಳಿಗಳ ಜನರನ್ನು ಒಕ್ಕಲೆಬ್ಬಿಸಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ 8 ಸಾವಿರ ಎಕರೆ ಜಮೀನು ಭೂ ಸ್ವಾಧೀನಕ್ಕೆ ಮುಂದಾಗಿರುವ ಕ್ರಮವನ್ನು ರೈತ ಸಂಘ ವಿರೋಧಿಸಲಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಲಿಂಗಪ್ಪಾಜಿ, ಬೊಮ್ಮೇಗೌಡ, ಚಂದ್ರು ಉಪಸ್ಥಿತರಿದ್ದರು.