Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಭಾಷೆಯಲ್ಲಿಯೇ ನಾಮಪಲಕ ಅಳವಡಿಸಿ: ಜಿಲ್ಲಾಧಿಕಾರಿ ಸೂಚನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ರೀತಿಯ ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳು ಮತ್ತು ಕಚೇರಿಗಳಲ್ಲಿ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದ್ದಾರೆ.

ಸರ್ಕಾರದ ಎಲ್ಲಾ ಕಚೇರಿಗಳ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರತಕ್ಕದ್ದು. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದ್ದು, ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸತಕ್ಕದೆಂದು ಸೂಚಿಸಿದ್ದಾರೆ.

ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತಿಗಳು, ಹೋರಾಟಗಾರರು ಪದೇ ಪದೇ ಮನವಿ ಸಲ್ಲಿಸಿ ಮಂಡ್ಯ ನಗರ ಹಾಗೂ ಇತರ ತಾಲೂಕು ಕೇಂದ್ರಗಳು ಪಟ್ಟಣಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳು ಮತ್ತು ಕಚೇರಿಗಳಲ್ಲಿ ಸಾಮಾನ್ಯವಾಗಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುತ್ತಿರುವುದಿಲ್ಲ ಎಂದು ದೂರುಗಳು, ಆಕ್ಷೇಪಣೆಗಳನ್ನು ವ್ಯಕ್ತವಾಗಿವೆ, ಆದ್ದರಿಂದ ಕನ್ನಡ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಅಧಿಕೃತ ಭಾಷೆ

ಕರ್ನಾಟಕ ರಾಜ್ಯವು ರಚನೆಯಾಗಿ 68 ವರ್ಷಗಳಾಗಿದ್ದು, ಕನ್ನಡವನ್ನು ಸಂಪರ್ಕ ಭಾಷೆಯಾಗಿ ಅಧಿಕೃತವಾಗಿ ಮತ್ತು ಸಾರ್ವಜನಿಕವಾಗಿ ಬಳಕೆ ಮಾಡುವುದು ಅಗತ್ಯವಿರುತ್ತದೆ, ಕನ್ನಡ ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾಷೆಯಾಗಿರುತ್ತದೆ. ಕೇಂದ್ರ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಿದ್ದು, ಕನ್ನಡ ಭಾಷೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸ್ಥಾನಮಾನ ಗಳಿಸಿದೆ. ಕರ್ನಾಟಕ ಸುವರ್ಣ ಸಂಭ್ರಮ-50 ರ ಆಚರಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳ, ವಾಣಿಜ್ಯ ವ್ಯವಹಾರ ಕೇಂದ್ರಗಳ ಮತ್ತು ಅಂಗಡಿ, ಮುಂಗಟ್ಟುಗಳ ಪ್ರತಿಯೊಂದು ಕಾರ್ಯಸಂಸ್ಥೆಗಳು ತಮ್ಮ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲೇ ಅಳವಡಿಸತಕ್ಕದ್ದು ಎಂದಿದ್ದಾರೆ.

ಜಿಲ್ಲಾಧಿಕಾರಿ ನೀಡಿರುವ ಸೂಚನೆಯಲ್ಲೇನಿದೆ….

ಕನ್ನಡ ಭಾಷೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ನಾಮಫಲಕಗಳನ್ನು ಬರೆಯಿಸುವುದು. ಪ್ರತಿಯೊಂದು ಕಾರ್ಯ ಸಂಸ್ಥೆಯ ನಾಮಫಲಕವು ಕನ್ನಡದಲ್ಲಿರತಕ್ಕದ್ದು ಮತ್ತು ಇತರೆ ಭಾಷೆಗಳನ್ನು ಬಳಸಿರುವ ಸಂದರ್ಭಗಳಲ್ಲಿ, ಆ ಭಾಷೆಯಲ್ಲಿರುವ ಹೆಸರು ಮತ್ತು ಪದಗಳು ಕನ್ನಡ ಆವೃತ್ತಿಯ ಕೆಳಗೆ ಬರತಕ್ಕದ್ದು, ಕನ್ನಡ ನಾಮಫಲಕವನ್ನು ಹಚ್ಚು ಎದ್ದು ಕಾಣುವಂತೆ ಬರೆದಿರತಕ್ಕದ್ದು ಹಾಗೂ ಇತರೆ ಭಾಷೆಗಳಿಂತಲೂ ಹೆಚ್ಚು ಸ್ಥಳಾವಕಾಶವನ್ನು ಕನ್ನಡ ಭಾಷೆಗೆ ಕಲ್ಪಿಸತಕ್ಕದ್ದು.

ಪರವಾನಗಿ ನವೀಕರಣ ಸಮಯದಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕ ಇರುವ ಬಗ್ಗೆ ಸ್ಥಳೀಯ ಸಂಸ್ಥೆಗಳು ಖಚಿತಪಡಿಸಿಕೊಳ್ಳತಕ್ಕದ್ದು, ಕನ್ನಡ ಭಾಷೆಯಲ್ಲಿ ನಾಮಫಲಕವನ್ನು ಅಳವಡಿಸದವರ ಪರವಾನಗಿ ರದ್ದು ಪಡಿಸಲು ಕ್ರಮತೆಗೆದುಕೊಳ್ಳುವುದು ಮತ್ತು ದಂಡ ವಿಧಿಸುವುದು.

ಕರ್ನಾಟಕದಲ್ಲಿ ಎಲ್ಲಾ ಆಡಳಿತಾತ್ಮಕ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ವಾಣಿಜ್ಯ ವ್ಯವಹಾರ ಕೇಂದ್ರಗಳು, ವಾಣಿಜ್ಯ ಸಂಕೀರ್ಣಗಳು, ಅಂಗಡಿ ಮುಂಗಟ್ಟುಗಳ ಮತ್ತು ಕಾರ್ಯಸಂಸ್ಥೆಗಳ ಕಛೇರಿಗಳಲ್ಲಿ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವುದು.

ನಗರಸಭೆ ಪೌರಾಯುಕ್ತರು, ಜಿಲ್ಲೆಯಲ್ಲಿನ ಎಲ್ಲಾ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪುರಸಭೆ, ಪಟ್ಟಣ ಪಂಚಾಯಿತಿಯ ಎಲ್ಲಾ ಮುಖ್ಯಾಧಿಕಾರಿಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸತಕ್ಕದ್ದು, ಅದೇ ರೀತಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಬಳಸದೇ ಇರುವವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!