ವಿಶೇಷ ಚೇತನರಿಗೆ ಛಲ, ಹಠವಿದ್ದರೆ ಏನಾದರೂ ಸಾಧಿಸಬಹುದು, ಕಾನೂನಿನಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಇದರ ಜೊತೆಗೆ ವಿಶೇಷ ಚೇತನರಿಗೆ ಸಮಾನವಾದ ಅವಕಾಶ ಜೊತೆಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ, ಆದ್ದರಿಂದ ಯಾವುದೇ ಸಾಧನೆ ಮಾಡಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ ಹೇಳಿದರು.
ಮಂಡ್ಯದ ಗಾಂಧಿಭವನದಲ್ಲಿ ಮಾತೃ ಅಂಧರ ಮತ್ತು ಇತರೆ ಅಂಗವಿಕಲ ಶಿಕ್ಷಣ ಸಂಸ್ಥೆ ಬೆಂಗಳೂರು, ಬರ್ಡ್ಸ್ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಶಾಸದನ, ಪ್ರೇರಣ, ಪ್ರೀತಿ ನಿಲಯ ಹಾಗೂ ವಿಶೇಷ ಮಕ್ಕಳ ಸಂಸ್ಥೆ ಇವರು ಸಂಯುಕ್ತಾಶ್ರಯದಲ್ಲಿ ವಿಶ್ವವಿಕಲಚೇತನರ ದಿನಾಚರಣೆಯ ಅಂಗವಾಗಿ ನಡೆದ ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳಿವೆ. ಕಾನೂನು ಸಮರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳಿಂದ ಉಚಿತವಾಗಿ ಕಾನೂನು ನೆರವನ್ನು ನೀಡಲಾಗುತ್ತಿದೆ, ಅದನ್ನು ಸದಪಯೋಗಪಡಿಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಮಾತನಾಡಿ, ವಿಶೇಷ ಚೇತನರಿಗೆ ಸರ್ಕಾರದ ಹಲವು ನೆರವುಗಳಿವೆ. ಅವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿಶೇಷ ಚೇತನರಿಗೆ ಹಿಂಸೆ, ನಿಂದನೆ, ದೌರ್ಜನ್ಯ ಗಳು ನಡೆಯುತ್ತೀವೆ, ಇದನ್ನು ತಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷ ಕೆ.ನಾಗಣ್ಣಗೌಡ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಕಾರ್ಯಕ್ರಮದ ಸಂಯೋಜಕಿ ಶೋಭಾವತಿ, ಡಿಡಿಪಿಐ ಶಿವರಾಮೇಗೌಡ, ಬಿ.ಇ.ಒ ಗಳಾದ ಸೌಭಾಗ್ಯ, ಮಹದೇವು, ಪ್ರೇರಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ್, ಫಾದರ್ ಜಾಯ್ಸನ್ ಜೋಶ್, ಸದಸ್ಯರಾದ ವಿಮಲ, ಶ್ವೇತಾ ಇನ್ನಿತರರು ಹಾಜರಿದ್ದರು.