ವಿಕಲಚೇತನರು ತಮ್ಮಲ್ಲಿನ ಕೀಳರಿಮೆ ದೂರಮಾಡಿ, ತಮಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿಶೇಷ ಸಾಧನೆ ಮಾಡಬೇಕು, ಸಾಮಾನ್ಯ ಜನತೆ ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶ ನೀಡಿದರೆ ವಿಕಲಚೇತನರೂ ಸಹ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ ಅಭಿಪ್ರಾಯಪಟ್ಟರು.
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ವಿಕಲಚೇತನ ಡಿ. ಮಧುಸೂದನ್ ಅವರು ಇದೇ ಜುಲೈ 28 ರಿಂದ ಆಗಸ್ಟ್ 5 ರವರೆಗೆ ಜರ್ಮನಿಯಲ್ಲಿ ನಡೆಯಲಿರುವ 8ನೇ ವಿಶ್ವ ಡ್ವಾರ್ಫ್ ಗೇಮ್ಸ್ 2023 ನ ಈಜು ಸ್ಫರ್ಧೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮಮಿತ್ರ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಿ ಮಾತನಾಡಿದರು.
ಡಿ.ಮಧುಸೂಧನ್ ಅವರು ಕುಬ್ಜರಾದರೂ ಸಹ ಉತ್ತಮ ಈಜುಗಾರರಾಗಿದ್ದಾರೆ. ತಾಲ್ಲೂಕು, ಜಿಲ್ಲಾ, ರಾಜ್ಯ, ಅಂತಾರಾಜ್ಯಮಟ್ಟದ ಕುಬ್ಜರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಜರ್ಮನ್ ದೇಶಕ್ಕೆ ಹೋಗಲು ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವಿಚಾರವನ್ನು ತಿಳಿದ ವಿಜಯ್ ರಾಮೇಗೌಡ ಅವರು ತಮ್ಮ ಮಿತ್ರ ಫೌಂಡೇಶನ್ ಸಂಸ್ಥೆಯ ವತಿಯಿಂದ ಆರ್ಥಿಕ ನೆರವು ನೀಡಿ ಶುಭ ಕೋರಿ, ಸ್ಪರ್ಧೆಯಲ್ಲಿ ವಿಜೇತರಾಗಿ ಭಾರತ ದೇಶಕ್ಕೆ ಹಾಗೂ ತಾಲ್ಲೂಕಿಗೆ ಕೀರ್ತಿ ತರುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್, ಬಸವರಾಜು, ರಮೇಶ್, ಶಮಂತ್ ಇತರರು ಇದ್ದರು.