ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದ ಕ್ಷೀರಸಾಗರ ಮಿತ್ರಕೂಟ ಕೀಲಾರದಲ್ಲಿ ನಿರ್ಮಾಣ ಮಾಡುತ್ತಿರುವ ಸಾಂಸ್ಕೃತಿಕ ಭವನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಆನಂದ್ ಸುವರ್ಣ ಅವರು, ತಮ್ಮ ಸಿಬ್ಬಂದಿಗಳೊಂದಿಗೆ ಕೀಲಾರಕ್ಕೆ ಆಗಮಿಸಿ ಕ್ಷೀರಸಾಗರ ಮಿತ್ರಕೂಟದ ಪದಾಧಿಕಾರಿಗಳಿಗೆ ಆದೇಶದ ಪ್ರತಿಯನ್ನು ನೀಡಿದರು. ನಂತರ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಡೈರಿಗಳು, ದೇವಸ್ಥಾನಗಳು, ಸಮುದಾಯ ಭವನಗಳು, ಕೆರೆ ಕಟ್ಟೆಗಳ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕೆ.ಎಂ.ಕೃಷ್ಣೇಗೌಡ ಕೀಲಾರ ಮಾತನಾಡಿ, 1998 ರಲ್ಲಿ ಸಮಾನ ಮನಸ್ಕರಿಂದ ಪ್ರಾರಂಭವಾದ ಸಂಸ್ಧೆ ಕಳೆದ 25ವರ್ಷಗಳಿಂದ ಯುವಜನ ಚಟುವಟಿಕೆ, ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ ಸಂವರ್ಧನೆ ಜೊತೆಗೆ ಸಮುದಾಯ ಸೇವಾ ಚಟುವಟಿಕೆಯನ್ನು ಮಾಡಿಕೊಂಡು ಬರುತ್ತಿದೆ. ಭವನದ ಕಾಮಗಾರಿಗೆ ಸುಮಾರು 60 ಲಕ್ಷ ವೆಚ್ಚವಾಗುತ್ತಿದೆ. ಗ್ರಾಮಸ್ಥರು ಹಾಗೂ ನಮ್ಮ ಸಂಸ್ಥೆಯ ಹಿತೈಷಿಗಳು ಉದಾರವಾಗಿ ಧನಸಹಾಯ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರಾದ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಅವರು ಅನುದಾನ ನೀಡಿದ್ದಾರೆ. ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಅವರು ಕೂಡ ಭರವಸೆ ನೀಡಿದ್ದಾರೆ ಎಂದರು.
ಕಳೆದ ತಿಂಗಳು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಪೂಜ್ಯರು 2ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೀರಸಾಗರ ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ ಅಧ್ಯಕ್ಷ ಕೆ.ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಸ್.ರಮೇಶ್, ಶಿವಶಂಕರ್, ಮಿತ್ರಕೂಟದ ಪದಾಧಿಕಾರಿಗಳಾದ ಕೆ.ಆರ್.ರಮೇಶ್, ಕೆ.ಹೆಚ್.ರಮೇಶ್ ಕೆ.ಸಿ.ನಾಗೇಶ್ ಹಾಗೂ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳಿದ್ದರು.