ಇಂದು ಭಾರತ ದೇಶ ಸಾಕಷ್ಟು ಅಪಾಯದ ಪರಿಸ್ಥಿತಿ ಎದುರಿಸುತ್ತಿದ್ದು, ನಾವು ರಾಷ್ಟ್ರ ರಕ್ಷಣೆಗಾಗಿ ಬಲಿದಾನ ಮಾಡಿ ರಾಷ್ಟ್ರ ರಕ್ಷಿಸಿ, ಉಳಿಸುವ ಕೆಲಸ ಮಾಡಬೇಕಿದೆ ಎಂದು ಬೇಬಿ ಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.
ಮಂಡ್ಯ ನಗರದ ಪಿಇಎಸ್ ಕಾಲೇಜಿನ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ನಾವು ಮಠ ಮತ್ತು ಭಕ್ತರ ಮನೆ ಪೂಜೆ ಮಾಡಿಕೊಂಡು ಹೋಗುತ್ತಿದ್ದೇವೆ. ಆದರೆ ಜಾಗೋ ಭಾರತ್ ಕಾರ್ಯಕ್ರಮಕ್ಕೆ ಹೋಗಿ ಬಂದಾಗಿನಿಂದ ರಾಷ್ಟ್ರ ರಕ್ಷಣೆಗಾಗಿ ನಾವು ಏನಾದರೂ ಹೋರಾಟ ಮಾಡಬೇಕಿದೆ ಎನಿಸಿದೆ. ಏನಾದರೂ ಮಾಡಿಯಾದರೂ ಸರಿ ರಾಷ್ಟ್ರ ಉಳಿಸುವ ಕೆಲಸ ಮಾಡಬೇಕೆಂದು ನಾನು ಸಿದ್ದನಾಗಿದ್ದೇನೆ. ಅದರಂತೆ ದೇಹ ತ್ಯಾಗ ಮಾಡಿಯಾದರೂ ರಾಷ್ಟ್ರ ರಕ್ಷಣೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕಿದೆ ಎಂದರು.
ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಎಲ್ಲರೂ ಹಣ,ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ನಾನು,ನನ್ನ ಮಕ್ಕಳು, ಮಡದಿ ಚೆನ್ನಾಗಿದ್ದರೆ ಸಾಕು ಎಂದು ಭಾವಿಸುತ್ತಿದ್ದಾರೆ. ಇದನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ರಕ್ಷಿಸುವ ಸಂಕಲ್ಪ ಮಾಡಬೇಕಿದೆ ಎಂದರು.
ನಮ್ಮ ದೇಶಕ್ಕೆ ಹೊರಗಡೆಯಿಂದ ವ್ಯಾಪಾರಕ್ಕೆ ಎಂದು ಬಂದ ಬ್ರಿಟಿಷರನ್ನು ಒದ್ದೋಡಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಮಾಡಿ ರಾಷ್ಟ್ರ ರಕ್ಷಣೆ ಮಾಡಿದ್ದಾರೆ. ಆದರೆ ಇಂದು ಹಣ, ಅಧಿಕಾರದ ಆಸೆಗಾಗಿ ಹಲವರು ಬದುಕುತ್ತಿದ್ದಾರೆ ಇಂದು ದೇಶದಲ್ಲಿ ಜಾತಿ ಮತ್ತು ಧರ್ಮಕ್ಕೆ ಕುತ್ತು ಬಂದಿದೆ. ಕ್ರೈಸ್ತ ಸಂಘಗಳು ದಲಿತರಿಗೆ ಆರ್ಥಿಕ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದು, ಇದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು ನಾವೆಲ್ಲ ಭಾರತೀಯರು ಎಂದು ದೇಶ ರಕ್ಷಣೆ ಮಾಡಬೇಕಿದೆ ಎಂದರು.
ನಿವೃತ್ತ ಕಾರ್ಯ ಪಾಲಕ ಅಭಿಯಂತರ ವಿಜಯ್ ಕುಮಾರ್ ಮಾತನಾಡಿ ಮಾಧವ ಸದಾಶಿವ ರಾವ್ ಗೋಳ್ವಾಲ್ಕರ್ ಎಲ್ಲಾ ಜಾತಿ, ವರ್ಗದ ಜನರಲ್ಲಿ ಭಾವೈಕ್ಯತೆ ಮತ್ತು ರಾಷ್ಟ್ರೀಯತೆ ಮೂಡಿಸಲು ಆರ್ ಎಸ್ ಎಸ್ ಸ್ಥಾಪಿಸಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಬಿಜೆಪಿ ಸರ್ಕಾರ ಅವರಿಗೆ ಉನ್ನತ ಗೌರವ ಸಮರ್ಪಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಶ್ರೀ ಗುರೂಜಿ ಪುಸ್ತಕದ ಬಗ್ಗೆ ಮಾತನಾಡಿದರು.