ಮಕ್ಕಳು ಬಾಲ್ಯದಿಂದಲೇ ಶಿಸ್ತಿನೊಂದಿಗೆ ಓದಿನತ್ತ ಹೆಚ್ಚಿನ ಗಮನ ಹರಿಸಿದರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಗ್ರಾಮಾಂತರ ಸಿಪಿಐ ಎಂ.ಜಗದೀಶ್ ಹೇಳಿದರು.
ಮಳವಳ್ಳಿ ತಾಲ್ಲೂಕಿನ ಕೆಂಬೂತಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಕೆಲ ಕಾಲ ಮಕ್ಕಳಿಗೆ ಪಾಠ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಸರ್ಕಾರದ ಹಲವು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದರು.
ಶಾಲೆಯಲ್ಲಿ ಶಿಸ್ತಿನಿಂದ ಶಿಕ್ಷಕರೊಂದಿಗೆ ನಡೆದುಕೊಳ್ಳಬೇಕು. ಗುರುಗಳನ್ನು ಗೌರವಿಸಿದ್ದರೆ ಜೀವನದ ಉತ್ತಮವಾಗಿರುತ್ತದೆ. ಅಲ್ಲದೇ ಪ್ರತಿದಿನ ಕಡ್ಡಾಯವಾಗಿ ಬೆಳಿಗ್ಗೆ ಮತ್ತು ರಾತ್ರಿ ಹೆಚ್ಚಿನ ಸಮಯ ಓದಿನತ್ತ ಆಸಕ್ತಿ ವಹಿಸಬೇಕು ಎಂದು ಮಕ್ಕಳಿಗೆ ಅರ್ಧ ಗಂಟೆ ಪಾಠ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜು, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಸಿಆರ್ ಪಿಗಳಾದ ಸಿದ್ದರಾಜು, ಬಾಬು, ಮುಖ್ಯಶಿಕ್ಷಕ ನಾಗರಾಜಪ್ಪ ಇದ್ದರು.