‘ಟಿಪ್ಪು ಎಕ್ಸ್ಪ್ರೆಸ್’ ರೈಲಿನ ಹೆಸರು ಬದಲಾಯಿಸಿ ‘ಒಡೆಯರ್ ಎಕ್ಸ್ಪ್ರೆಸ್’ ಎಂದು ಮರು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರೈಲಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಡ್ಯ ರೈಲು ನಿಲ್ದಾಣಕ್ಕೆ ಮೈಸೂರು ಕಡೆಯಿಂದ ಬಂದ ಒಡೆಯರ್ ಎಕ್ಸ್ಪ್ರೆಸ್ ರೈಲು ನಿಲ್ಲುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗು ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಬಾಳೆ ಕಂದು, ಬಲೂನ್ ಕಟ್ಪಿ, ಬೂದಗುಂಬಳ ಹೊಡೆದು ಪೂಜೆ ಸಲ್ಲಿಸಿದರು. ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ಈ ನಾಡಿಗೆ ಮೈಸೂರು ಒಡೆಯರ್ ವಂಶಸ್ಥರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರು ನಾಮಕರಣ ಮಾಡಬೇಕು. ಅಂತೆಯೇ ಮೈಸೂರು-ತಾಳಗುಪ್ಪ ರೈಲಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಹೆಸರಿಡಬೇಕೆಂಬುದು ಹಲವು ವರ್ಷದ ಮನವಿಯಾಗಿತ್ತು ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ವ್ಯಕ್ತಿತ್ವ ಕುಬ್ಜಗೊಳಿಸಲು ಸಾಧ್ಯವಿಲ್ಲ
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಜನರ ವಿರೋಧವಿದ್ದರೂ ಚೆನ್ನೈ-ಮೈಸೂರು ಸಂಚರಿಸುವ ರೈಲಿಗೆ ಟಿಪ್ಪು ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಿದ್ದರು. ಈ ಬಗ್ಗೆ ಸಂಸದ ಪ್ರತಾಪಸಿಂಹ ಅವರು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಪತ್ರ ಬರೆದು ಒಡೆಯರ್ ಅವರ ಹೆಸರನ್ನಿಡುವಂತೆ ಒತ್ತಾಯಿಸಿದ್ದರು.
ಇದಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುತ್ತಿದ್ದ ತಾಳಗುಪ್ಪ ರೈಲಿಗೆ ‘ಕುವೆಂಪು ಎಕ್ಸ್ಪ್ರೆಸ್’ ಎಂದು ಹೆಸರಿಡಲಾಗಿದೆ. ಇದರೊಂದಿಗೆ ಒಕ್ಕಲಿಗ ಸಮುದಾಯದ ಜನರಿಗೂ ಗೌರವ ತಂದುಕೊಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಸಂಸದ ಪ್ರತಾಪ್ಸಿಂಹ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಎಚ್.ಆರ್.ಅರವಿಂದ್, ವಿವೇಕ್, ಡಾ.ಸದಾನಂದ, ಸಿ.ಟಿ.ಮಂಜುನಾಥ್, ನಾಗಾನಂದ, ವಸಂತ, ಮಹೇಶ್, ಹರ್ಷ, ಮನು, ನವೀನ್, ಶಿವಕುಮಾರ್ ಇತರರಿದ್ದರು.