ಪಾಂಡವಪುರ ತಾಲ್ಲೂಕಿನ ಎಲೆಕೆರೆ ಬಳಿ ಪಾರ್ವತಮ್ಮ ಎಂಬ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದ ಕಾಂತರಾಜು (35) ಬಂಧಿತ ಆರೋಪಿಯಾಗಿದ್ದು, ಈತನು ಸ್ವತಃ ಅತ್ತೆಯಾದ ಪಾರ್ವತಮ್ಮ ಅವರನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ.
ಕೊಲೆಯಾದ ಪಾರ್ವತಮ್ಮ ಅವರ ಪುತ್ರಿ ಅರ್ಪಿತಾ ಅವರನ್ನು ಈತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವತಃ ಅತ್ತೆಯ ಮೇಲೆ ದ್ವೇಷ ಬೆಳಿಸಿಕೊಂಡಿದ್ದ ಈತ, ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ
ಮಂಡ್ಯ ಜಿಲ್ಲಾ ಅಪರ ಪೊಲೀಸ್ ಆಧೀಕ್ಷಕ ಸಿಇ ತಿಮ್ಮಯ್ಯ, ಶ್ರೀರಂಗಪಟ್ಟಣ ಉಪ ವಿಭಾಗದ ಪೊಲೀಸ್ ಉಪಅಧೀಕ್ಷಕ ಮುರಳಿ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪಿಐ ಬಿ ಜಿ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಕುಮಾರ್, ಸಿಬ್ಬಂದಿಯವರಾದ ಶ್ರೀನಿವಾಸ್ ಮೂರ್ತಿ, ಮುತ್ತುರಾಜ್, ದೇವಯ್ಯ, ಶಂಕರ, ಪ್ರೀತಿ, ರವೀಂದ್ರ ಅವರ ತಂಡವು ಆರೋಪಿಯನ್ನು ಪಾಂಡವಪುರ ಟೌನ್ ನಲ್ಲಿ ಬಂಧಿಸಿದೆ.
ಕೃತ್ಯ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರನ್ನು ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಅವರು ಶ್ಲಾಘಿಸಿ, ಪ್ರಶಂಸಿಸಿದ್ದಾರೆ.