ಮಹಿಳಾ ಮೀಸಲಾತಿ ಬಿಲ್ನಲ್ಲಿ ಒಬಿಸಿ ಸಮುದಾಯದ ಮಹಿಳೆಯರನ್ನು ಸೇರ್ಪಡೆ ಮಾಡಬೇಕು, ಬಿಲ್ನ್ನು ತಕ್ಷಣಕ್ಕೆ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಆಗ್ರಹಿಸಿದ್ದು, ಮಹಿಳಾ ಮೀಸಲಾತಿ ಬಿಲ್ ಸದನದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಈ ವೇಳೆ ಪ್ರತಿಕ್ರಿಯಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಹೊಸ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಓಬಿಸಿ ಕೋಟಾದ ಬಗ್ಗೆ ಈ ಮೊದಲು ಏನೂ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.
ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಸದನದಲ್ಲಿ ಮಾತನಾಡುತ್ತಾ, ತಮ್ಮ ಪಕ್ಷವು ಮಸೂದೆಯನ್ನು ಬೆಂಬಲಿಸುತ್ತದೆ. ಆದರೆ ಮಹಿಳೆಯರಿಗೆ 33% ಕೋಟಾದೊಳಗೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಪತಿ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಮೊದಲ ವ್ಯಕ್ತಿಯಾಗಿರುವುದರಿಂದ ಮಸೂದೆಯ ಕುರಿತು ಮಾತನಾಡುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ ಎಂದು ಅವರು ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪರವಾಗಿ ನಾನು ‘ನಾರಿ ಶಕ್ತಿ ವಂದನಾ ಅಧಿನಿಯಮವನ್ನು’ ಬೆಂಬಲಿಸುತ್ತೇನೆ. ಹೊಗೆ ತುಂಬಿದ ಅಡುಗೆ ಮನೆಯಿಂದ ಫ್ಲಡ್ ಲೈಟ್ ಸ್ಟೇಡಿಯಂವರೆಗೆ ಭಾರತದ ಮಹಿಳೆಯ ಪಯಣ ಬಹಳ ಸುದೀರ್ಘವಾದುದು ಆದರೆ ಅವಳು ಕೊನೆಗೆ ಅದನ್ನು ತಲುಪಿದ್ದಾಳೆ ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕೆ ಮತ್ತು ನವ ಭಾರತದ ನಿರ್ಮಾಣಕ್ಕೆ ಮಹಿಳೆಯರು ಪುರುಷರಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸಿದ್ದಾರೆ. ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವುದು ನನಗೆ ಭಾವಕ ಕ್ಷಣವಾಗಿದೆ. ಏಕೆಂದರೆ ನನ್ನ ಪತಿ ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿಯನ್ನು ಮೊದಲ ಬಾರಿಗೆ ತಂದರು. ಆದರೆ ಅದನ್ನು 7 ಮತಗಳಿಂದ ಸೋಲಿಸಲಾಯಿತು. ಬಳಿಕ ಪಿವಿ ನರಸಿಂಹ ರಾವ್ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಬಿಲ್ನ್ನು ಪಾಸ್ ಮಾಡಿದೆ. ರಾಜೀವ್ ಗಾಂಧಿಯವರ ಉದ್ದೇಶ ಭಾಗಶಃ ಆ ಮೂಲಕ ಪೂರ್ತಿಯಾಗಿತ್ತು. ಆ ಬಳಿಕ ಸುದೀರ್ಘ ವರ್ಷಗಳ ಬಳಿಕ ಅವರ ಬೇಡಿಕೆ ಈಡೇರುತ್ತಿದೆ ಎಂದು ಹೇಳಿದ್ದಾರೆ.