ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ, ಆದರೆ ಇದ್ಯಾವುದಕ್ಕೂ ತಂದೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಹೇಳಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಯೋಗಾಭ್ಯಾಸಿತರ ಮಹಿಳಾ ಬಳಗ ಆಯೋಜಿಸಿದ್ದ ವಿಶ್ವ ತಂದೆಯರ ದಿನಾಚರಣೆ ಪ್ರಯುಕ್ತ ತಂದೆಯಂದಿರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ ತಿಂಗಳು ಫಾದರ್ಸ್ ಡೇ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ಪಾದರ್ಸ್ ಡೇ ಅನ್ನು ಆಚರಣೆ ಮಾಡಿ ಗೌರವ ಸಮರ್ಪಿಸುತ್ತಾರೆ. ಮಕ್ಕಳ ಬಗ್ಗೆ ಕಾಳಜಿ ತೋರಿಸುವವನು ತಂದೆ. ತನ್ನ ಜವಾಬ್ದಾರಿಯನ್ನು ಪೂರೈಸುತ್ತಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುವ ಶ್ರಮಜೀವಿ ಎಂದರೆ ಅಪ್ಪ ಮಾತ್ರ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ ಎಂದು ತಿಳಿಸಿದರು.
ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ನಾಯಕ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿಯಾಗಿ ನಿಲುತ್ತಾರೆ ಎಂದು ಸ್ಮರಿಸಿದರು.
20ನೇ ದಶಕದಲ್ಲಿ ಫಾದರ್ಸ್ ಡೇ ಅನ್ನು ಅಮೆರಿಕಾದಲ್ಲಿ ಆಚರಿಸಲಾಗಿತ್ತು. ವಾಷಿಂಗ್ಟನ್ನ ಸ್ಪೋಕೇನ್ನ ಸೊನೊರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆ ಮೊದಲ ಬಾರಿಗೆ ತನ್ನ ತಂದೆಗೆ ಗೌರವ ಸೂಚಿಸಿದಳು. ಪ್ರತಿ ವರ್ಷ ಮದರ್ಸ್ ಡೇ ಆಚರಿಸುತ್ತಿರುವ ನಾವು ಫಾದರ್ಸ್ ಡೇಯನ್ನು ಏಕೆ ಆಚರಿಸಬಾರದು ಎಂದು ಧ್ವನಿ ಎತ್ತಿದರು ಎಂದು ವಿವರಿಸಿದರು.
ತನ್ನ ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ, ತಾಯಿ ಇಲ್ಲದ ಆರು ಮಕ್ಕಳನ್ನು ತಂದೆ ವಿಲಿಯಂ ಜಾಕ್ಸನ್ ಸ್ಮಾರ್ಟ್ ಆಗಿ ಬೆಳೆಸಿದ್ದಾರೆ. ಹಾಗಾಗಿ ತನ್ನ ತಂದೆಗೆ ಸೂಕ್ತವಾದ ಗೌರವವನ್ನು ನೀಡಬೇಕು ಎಂದು ಭಾವಿಸಿ, 1910ರಲ್ಲಿ ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಿದರು. ನಂತರ 1972ರಲ್ಲಿ ಅಧ್ಯಕ್ಷ ರಿಚರ್ಡ್ನಿಕ್ಸನ್ ತಂದೆಯ ದಿನಾಚರಣೆ ಆಚರಿಸುವಂತೆ ಘೋಷಿಸಿದ ನಂತರ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಗಾಂಧಿಭವನದಲ್ಲಿ ಪ್ರತಿದಿನ ಯೋಗಾಭ್ಯಾಸ ಮಾಡುವ ಬಳಗದಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಯೋಗ ಗುರು ಬಾಲಕೃಷ್ಣ ತಂತ್ರಿ, ಹಿರಿಯ ಪತ್ರಕರ್ತ ಶ್ರೀಪಾದು, ಯೋಗಾಭ್ಯಾಸ ನಿರತರಾದ ಅನುಪಮಾ, ವಿಜಯಲಕ್ಷ್ಮಿ, ಮರಿಸ್ವಾಮಿ, ಡಾ.ಚಂದ್ರೇಗೌಡ, ನರಸಿಂಹಚಾರ್, ಶಿವಲಿಂಗೇಗೌಡ, ತಾರಾರಮೇಶ್, ದಯಾ ರಮೇಶ್ಚಾರ್, ರಾಣಿ, ರೇಖಾಶ್ರೀನಿವಾಸ್ ಮತ್ತಿತರರಿದ್ದರು.