ಜಿ.ಮಾದೇಗೌಡರ ದೂರದೃಷ್ಠಿಯಿಂದ ಕಾಳಮುದ್ದನದೊಡ್ಡಿಯಲ್ಲಿ ಅಂದು ಆರಂಭಗೊಂಡ ಭಾರತೀ ವಿದ್ಯಾಸಂಸ್ಥೆ ಹೆಮ್ಮರವಾಗಿ ಶಿಕ್ಷಣ ಕಾಶೀಯಾಗಿ ರೂಪುಗೊಂಡಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಿಸಿದರು.
ಮದ್ದೂರು ತಾಲ್ಲೂಕಿನ ಭಾರತೀ ವಿದ್ಯಾಸಂಸ್ಥೆಯ ಭಾರತೀ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದಿನ ಕಾಳಮುದ್ದನದೊಡ್ಡಿ ಇಂದು ಭಾರತೀನಗರವಾಗಿ ರೂಪುಗೊಂಡಿದ್ದು, ತಾಲ್ಲೂಕು ಕೇಂದ್ರದ ಸ್ವರೂಪದಲ್ಲಿ ಮೈದೆಳೆದಿದ್ದು, ಇದರ ಹೆಗ್ಗಳಿಕೆ ಜಿ.ಮಾದೇಗೌಡರಿಗೆ ಸಲ್ಲುತ್ತದೆ ಎಂದರು.
ತಂದೆ ಜಿ.ಮಾದೇಗೌಡರ ಹಾದಿಯನ್ನೇ ಅನುಸರಿಸಿ ತಂದೆಯ ಜೊತೆ ಕೈಜೋಡಿಸಿ ಶಿಕ್ಷಣ ಸಂಸ್ಥೆಯ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಮಧು ಜಿ.ಮಾದೇಗೌಡ ಪರಿಶ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳ ಶಿಕ್ಷಣ ಪಡೆಯುವಂತಾಗಿದೆ ಎಂದರು.
ಜಿ.ಮಾದೇಗೌಡರಿಗೆ ಪ್ರಿಯವಾಗಿದ್ದ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಫಲವಾಗಿ ಮಧು ಮಾದೇಗೌಡ ಅವರನ್ನು ಪದವೀಧರ ಮತದಾರರು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದ್ದು, ಶಿಕ್ಷಣ ಸಂಸ್ಥೆಯ ಬಲವರ್ದನೆ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಮಧು ಮಾದೇಗೌಡರು, ತಂದೆಯ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದಿರುವುದು ಹೆಮ್ಮೆಯ ವಿಚಾರವೆಂದರು.
ಜಿಲ್ಲೆಯ ರೈತರು ಹಾಗೂ ಕುಡಿಯುವ ನೀರು ಅವಲಂಬಿಸಿರುವ ಜನಸಾಮಾನ್ಯರಿಗೆ ಕನ್ನಂಬಾಡಿ ನೀರು ಪೂರೈಸಲು ಸರ್ಕಾರ ಬದ್ದವಾಗಿದ್ದು, ಕಾವೇರಿ ವಿಷಯದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ, ನಮ್ಮ ಜಿಲ್ಲೆಯ ರೈತರು ಹಾಗೂ ಜನಸಾಮಾನ್ಯರ ಜೊತೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿದ್ದು, ಎಂತಹ ಕಠಿಣ ಸಂದರ್ಭವನ್ನು ಎದುರಿಸಲು ಶಕ್ತರಾಗಿದ್ದೇವೆಂದರು.
ರಾಜ್ಯದ ಅನಾವೃಷ್ಠಿ ಸಮಸ್ಯೆಯನ್ನು ಮನಗೊಂಡು 195 ತಾಲೂಕಗಳನ್ನು ಬರಪೀಡಿತ ತಾಲ್ಲೂಕುಗಳಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ನಮ್ಮ ಜಿಲ್ಲೆಯ ಏಳು ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದ್ದು, ಸಿಗಬೇಕಾದ ಸೌಲಭ್ಯಗಳು ರೈತರಿಗೆ ತಲುಪಲು ನಮ್ಮ ಸರ್ಕಾರ ಕಾಳಜಿ ತೋರುತ್ತದೆ ಎಂದರು.
ಸಮಾರಂಭದಲ್ಲಿ ಬೆಳ್ಳಿ ಕಿರೀಟ ಸ್ವಿಕರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ, ಅಭಿನಂದನೆ ಸ್ವೀಕರಿಸಬೇಕೆಂದು ಕಳೆದ 1 ವರ್ಷದಿಂದ ಒತ್ತಾಯ ಮಾಡಲಾಗಿತ್ತು. ಇಂದು ಹಿತೈಷಿಗಳು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕಿರೀಟಧಾರಣೆಯನ್ನು ಸ್ವಿಕರಿಸಿದ್ದೆನೆ, ಇದಕ್ಕೆ ನನ್ನ ಅಭಿಮಾನಿಗಳಿಗೆ ನಾನು ಚಿರಋಣಿ ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರೈತರ ದ್ವನಿ, ಹೋರಾಟಗಾರ ಜಿ.ಮಾದೇಗೌಡ ಅವರು, ಅಂದು ಸಣ್ಣದಾಗಿ ಸ್ಥಾಪಿಸಿದ ಸಂಸ್ಥೆ, ಇಂದು ಕಾಲುವೆಯಾಗಿ ನದಿಯಾಗಿ ಸಾಗರೋಪಾದಿಯಲ್ಲಿ ಸಾಗುತ್ತಿದೆ. ಅವರು ಎಂದಿಗೂ ಅಧಿಕಾರದ ಆಸೆ ಪಟ್ಟವರಲ್ಲ, ಯಾವ ಅಧಿಕಾರಿ, ರಾಜಕಾರಣಿಯ ಮುಲಾಜಿಗೂ ಒಳಗಾದವರಲ್ಲ. ಕಳೆದ 40 ವರ್ಷಗಳಲ್ಲಿ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರಲಿಲ್ಲ ಇಂದು ನಿಮ್ಮ ಸೇವೆ ಮಾಡಲು ಮಧು ಮಾದೇಗೌಡರು ಗೆದ್ದು ಬಂದಿದ್ದಾರೆ, ಅವರು ಸದಾ ನಿಮ್ಮ ಜೊತೆ ಶಿಕ್ಷಕರ ಸಮಸ್ಯೆಗೆ ಸದನದಲ್ಲಿ ದ್ವನಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಶಾಸಕ ರವಿಕುಮಾರ್ ಗಣಿಗ ಹಾಗೂ ಕಾಲೇಜು ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.