ಮಂಡ್ಯನಗರದ ಸ್ಥಳೀಯ ನಾಗರೀಕರ ಕೋರಿಕೆ ಮೇರೆಗೆ ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ನಡೆಸುತ್ತಿರುವ ರಸ್ತೆ ಗುಂಡಿ ಮುಚ್ಚಿಸುವ ಅಭಿಯಾನ 8 ನೇ ದಿನಕ್ಕೆ ಕಾಲಿಟ್ಟಿದೆ.
ಮಂಡ್ಯ ನಗರದ ಕಲ್ಲಹಳ್ಳಿಯ 7 ವಾರ್ಡಿನ 8 ನೇ ಕ್ರಾಸ್ ನಲ್ಲಿ ನಾಗರೀಕರ ಕೋರಿಕೆ ಮೇರೆಗೆ ಬುಧವಾದ ಅಪಾಯಕಾರಿ ರಸ್ತೆ ಗುಂಡಿ ಮುಚ್ಚಿಸುವ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಲಿಂಗೇಗೌಡ ಮುದ್ದನಘಟ್ಟ ಅವರು, ವೈಯಕ್ತಿಕ ವೆಚ್ಚದಲ್ಲಿ ಮಾನವೀಯತೆ ದೃಷ್ಠಿಯಿಂದ ಅಪಾಯಕಾರಿ ರಸ್ತೆಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ ಎಂದರು.
ಮಾಜಿ ಯೋಧರೊಬ್ಬರು ಗುಂಡಿಗೆ ಬಿದ್ದು ಪ್ರಾಣತ್ಯಾಗ ಮಾಡಿದ ಸನ್ನಿವೇಶ ಎಂತಹವರನ್ನು ಕರಗಿಸಿ ಬಿಡುತ್ತದೆ, ಆಗಲೇ ನಾನು ನಿರ್ಧಾರ ಮಾಡಿದೆ, ಇನ್ನಾರ ಜೀವವು ಹೋಗದಂತೆ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸಬೇಕೆಂದು ತೀರ್ಮಾನಿಸಿದೆ, ಅದರಂತೆ ಇಂದು ಅಭಿಯಾನ ನಡೆಯುತ್ತಿದೆ ಎಂದರು.
ಮಂಡ್ಯ ನಗರದ ವಿವಿಧ ವಾರ್ಡ್ ಗಳು ಮತ್ತು ಪ್ರಮುಖ ರಸ್ತೆಗಳಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ, ನಾಗರೀಕರ ಸ್ಪಂದನೆಯೂ ಉತ್ತಮವಾಗಿದೆ, ಯಾವುದೇ ಲಾಭದ ದುರುದ್ದೇಶದಿಂದ ಸೇವಾ ಕಾರ್ಯ ಮಾಡುತ್ತಿಲ್ಲ, ಕೆಲವರು ನನ್ನ ಸೇವೆಯನ್ನು ನಿಂದಿಸುವುದು ಉಂಟು, ಆದರೆ ಜೀವ ಉಳಿಸುವ ಒಳ್ಳೆಯ ಕೆಲಸ ನನಗೆ ನೆಮ್ಮದಿ ತರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್, ಶಶಿ, ಪ್ರಮೋದ್, ವಿಶ್ವನಾಥ್, ಚಂದ್ರಶೇಖರ್ ಮತ್ತು ಸ್ಥಳೀಯ ನಾಗರೀಕರು ಹಾಜರಿದ್ದರು.