ಇತ್ತೀಚಿನ ದಿನಗಳಲ್ಲಿ ಪೈಲ್ಸ್, ಫಿಷರ್, ಫಿಸ್ತುಲ ಸಮಸ್ಯೆ ಹೆಚ್ಚಾಗಿರುವ ಬಗ್ಗೆ,ಈ ಖಾಯಿಲೆಗಳ ಬಗ್ಗೆ ಜನರಲ್ಲಿರುವ ಭೀತಿಯ ಕುರಿತು ಜಾಗೃತಿ ಮೂಡಿಸುವ ಭಾಗವಾಗಿ ನವೆಂಬರ್ 19ರಂದು ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಚೀಫ್ ಕೊಲೊರೆಕ್ಟಲ್ ಸರ್ಜನ್ ಡಾ. ಸಿ.ಎಂ. ಪರಮೇಶ್ವರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಕ್ಯಾನ್ಸರ್, ಕ್ಷಯ,ಕುಷ್ಟ ರೋಗಗಳ ಬಗ್ಗೆ ರಾಷ್ಟ್ರೀಯ ಕಾರ್ಯಕ್ರಮ ಹಮ್ಮಿಕೊಂಡಂತೆ ಪೈಲ್ಸ್, ಫಿಸ್ತುಲ, ಫಿಶರ್ ಮೂಲವ್ಯಾಧಿ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.
ಭಾರತದಲ್ಲಿ ಸುಮಾರು ಶೇ.36ರಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದರೂ, ಯಾವುದೇ ರಾಷ್ಟ್ರೀಯ ಕಾರ್ಯಕ್ರಮಗಳು ಇರದಿರುವುದರಿಂದ ಜನರಿಗೆ ಈ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ನಾನು ಈ ಕಾಯಿಲೆಗಳ ಬಗ್ಗೆ ಒಂದು ವಿಶೇಷವಾದ ಅಧ್ಯಯನವನ್ನು ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಒಂದು ಸಂದೇಶವನ್ನು ನೀಡುವ ಭಾಗವಾಗಿ ಜಾಥಾ ನಡೆಸಲಾಗುತ್ತಿದೆ ಎಂದರು.
ನವೆಂಬರ್ 20 ವಿಶ್ವ ಮೂಲವ್ಯಾಧಿ ದಿನಾಚರಣೆ ಆಚರಿಸಲಾಗುತ್ತದೆ. ಮೂಲವ್ಯಾಧಿ ಕಾಯಿಲೆಯ ಬಗ್ಗೆ ರಾಷ್ಟ್ರೀಯ ಕಾರ್ಯಕ್ರಮ ಆಗಬೇಕು. ಜನಗಳು ಈ ಕಾಯಿಲೆಯಿಂದ ನರಳಬಾರದು ಎಂಬ ಉದ್ದೇಶದಿಂದ ನವೆಂಬರ್ 19ರಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯವರಿಗೆ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದೇವೆ.
ಈ ಜಾಥಾದಲ್ಲಿ ಹಲವು ಮಹನೀಯರು ಹಾಗೂ ಎಲ್ಲಾ ನರ್ಸಿಂಗ್,ಪ್ಯಾರಾ ಮೆಡಿಕಲ್ ಕಾಲೇಜುಗಳ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜನರಿಗೆ ಜಾಗೃತಿ ಮೂಡಿಸುವ ಭಾಗವಾಗಿ ಪೈಲ್ಸ್,ಫಿಸ್ತುಲ, ಫಿಷರ್ ರೋಗದ ಬಗ್ಗೆ, ಆಹಾರ ಪದ್ಧತಿ ಬಗ್ಗೆ ಉತ್ತಮ ಭಿತ್ತಿಚಿತ್ರ ಮಾಡಿಕೊಂಡು ಬರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಡಿ. ಜಯರಾಮ್ ಆಸ್ಪತ್ರೆಯ ಡಾ. ಮಾದೇಶ್, ವ್ಯವಸ್ಥಾಪಕ ಅಕ್ಷಯ್,ಎಸ್.ಡಿ. ಜಯರಾಮ್ ಶಿಕ್ಷಣ ಸಂಸ್ಥೆಗಳ ಸಿಇಓ ಶೃತಿ ಉಪಸ್ಥಿತರಿದ್ದರು.