ಬರೋಬರಿ 34 ಬೈಕ್ ಗಳನ್ನು ಕಳವು ಮಾಡಿದ್ದ ಮಹಾ ಖದೀಮನನ್ನು ಮಂಡ್ಯ ಜಿಲ್ಲಾ ಪೊಲೀಸರು ಬಂಧಿಸಿ, ಆತನಿಂದ ಎಲ್ಲಾ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ಬೈಕ್ ಗಳ ಒಟ್ಟು ಮೌಲ್ಯ 16.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಡ್ಡರಪಾಳ್ಯ ಗ್ರಾಮದ ರಾಜೇಶ್ ಎಸ್ @ ಕುಳ್ಳ ಬಿನ್ ಸಿದ್ದಪ್ಪಾಜಿ (34) ಪೊಲೀಸರ ಬಲೆಗೆ ಬಿದ್ದ ಆರೋಪಿಯಾಗಿದ್ದಾನೆ.
ಪ್ರಕರಣದ ವಿವರ
ಕಳೆದ ನ.25ರಂದು ಸಂಜೆ 5 ಗಂಟೆ ಸಮಯದಲ್ಲಿ ಮದ್ದೂರು ಟೌನ್ ಕೆ.ಎಸ್.ಆರ್.ಟಿ.ಸಿ ಬಳಿಯ ಕಾಫಿ ಡೇ ಸಮೀಪದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಆರೋಪಿ ರಾಜೇಶ್ ಎಸ್ @ ಕುಳ್ಳ ಬಿನ್ ಸಿದ್ದಪ್ಪಾಜಿ, ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲನ್ನು ಅನುಮಾನಾಸ್ಪದವಾಗಿ ಪೆಟ್ರೋಲ್ ಬಂಕ್ ಕಡೆಗೆ ತಳ್ಳಿಕೊಂಡು ಹೋಗುತ್ತಿದ್ದ. ಆಗ ಗಸ್ತಿನಲ್ಲಿದ್ದ ಮುಖ್ಯ ಪೊಲೀಸ್ ಪೇದೆ ಗುರುಪ್ರಸಾದ್ ಹೆಚ್.ಕೆ. ಹಾಗೂ ಪೇದೆ ಪರಮಾನಂದ ಬೂದಿಹಾಳ್ ಅವರು ಆತನನ್ನು ನಿಲ್ಲಿಸಿ ವಿಚಾರ ಮಾಡಿದಾಗ ಆತನು ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದ.
ಅಲ್ಲದೇ ಮೋಟಾರ್ ಸೈಕಲ್ ನ ದಾಖಲಾತಿಗಳನ್ನು ನೀಡದೇ ಅದರ ಬಗ್ಗೆ ಸಮಂಜಸವಾದ ಉತ್ತರ ನೀಡದೇ ಇದ್ದುದ್ದರಿಂದ ಆತನು ಮೋಟಾರ್ ಸೈಕಲ್ ಅನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರುವಂತೆ ಕಂಡು ಬಂದ ಮೇರೆಗೆ ಆತನನ್ನು ಮೋಟಾರ್ ಸೈಕಲ್ ಸಮೇತ ಮದ್ದೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ, ಆತನ ಮೇಲೆ ಮುಖ್ಯ ಪೊಲೀಸ್ ಪೇದೆ ಗುರುಪ್ರಸಾದ್ ಹೆಚ್.ಕೆ. ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಈ ಆಸಾಮಿಯು ವಿವಿಧ ಮಾದರಿಯ ಒಟ್ಟು 34 ಮೋಟಾರ್ ಸೈಕಲ್ ಗಳನ್ನು ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.
ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ವೇಣುಗೋಪಾಲ್ ನಿರ್ದೇಶನದ ಮೇರೆಗೆ ಮಳವಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಸಂತೋಷ್ ಅವರ ನೇತೃತ್ವದಲ್ಲಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳಾದ ನರೇಶ್ ಕುಮಾರ್, ಉಮೇಶ.ಆರ್.ಬಿ., ರವಿ.ಪಿ ಹಾಗೂ ಸಿಬ್ಬಂದಿಗಳಾದ ಗೀರೀಶ, ಗುರುಪ್ರಸಾದ್, ಪರಮಾನಂದ ಬೂದಿಹಾಳ್ ಅವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಶ್ಲಾಘಿಸಿದ್ದಾರೆ.