ವೈಯಕ್ತಿಕ ಅಪಘಾತ ವಿಮೆ ಮಾಡಿಸಿದ್ದ ವ್ಯಕ್ತಿ ಅಪಘಾತದಲ್ಲಿ ಸಾವಿಗೀಡಾದರೂ ವಿಮೆ ಸೌಲಭ್ಯ ನೀಡದೇ ಸೇವಾ ಲೋಪವೆಸಗಿಸಿದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ₹ 2.25 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಸುಂದರಸ್ವಾಮಿ (45) ಎಂಬುವರು ತಮ್ಮ KA-04 Z-4438 ಕಾರಿಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ ವೈಯಕ್ತಿಕ ಅಪಘಾತ(personal accident) ವಿಮೆಯನ್ನು ಪಡೆದುಕೊಂಡಿದ್ದರು. ಈ ಸಮಯದಲ್ಲಿ ಅಪಘಾತವಾಗಿ ಕಾರಿನ ಮಾಲೀಕ ಅಥವಾ ಚಾಲಕ ಮರಣ ಹೊಂದಿದರೆ ₹ 2 ಲಕ್ಷ ಪರಿಹಾರ ಸೌಲಭ್ಯ ಪಡೆಯುವುದಕ್ಕಾಗಿ ಹೆಚ್ಚುವರಿ ₹100 ಪಾವತಿಸಿ ವಿಮೆ ಸೌಲಭ್ಯ ಪಡೆದಿದ್ದರು.
ಆದರೆ ಸುಂದರಸ್ವಾಮಿ ಅವರು ಹಲಗೂರಿನ ಬಳಿ ಕಾರು ಚಾಲನೆ ಮಾಡುತ್ತಿದ್ದಾಗ ಆಗಸ್ಟ್ 25, 2015ರಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಸುಂದರಸ್ವಾಮಿ ಅವರ ಪತ್ನಿ ಬೇಬಿರತ್ನ ಅವರು ತಮ್ಮ ಪತಿ ಪಡೆದುಕೊಂಡಿದ್ದ ವಿಮೆಯ ಸೌಲಭ್ಯವನ್ನು ಪಡೆಯುವುದಕ್ಕಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಂಪನಿಯು ಆಕೆಗೆ ವಿಮೆ ಸೌಲಭ್ಯ ನೀಡದೇ ಅರ್ಜಿಯನ್ನು ತಿರಸ್ಕರಿಸಿತ್ತು.
ಇದರಿಂದ ಮನನೊಂದ ಬೇಬಿರತ್ನ ಅವರು ವಿಮಾ ಕಂಪನಿಯ ವಿರುದ್ಧ ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಿಮಾ ಕಂಪನಿಯೂ ಸೇವಾ ಲೋಪವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಚಂಚಲ ಎಂ.ಎನ್. ಅವರು ವಿಮಾದಾರರಿಗೆ ವಿಮಾ ಕಂಪನಿಯೂ ₹ 2.25 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿರಿ: ಸ್ಕ್ಯಾನಿಂಗ್ ಲೋಪ : ಮದ್ದೂರಿನ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ.ದಂಡ
ಬೇಬಿರತ್ನ ಅವರ ಪರವಾಗಿ ನ್ಯಾಯವಾದಿ ಆರ್. ಜಗನ್ನಾಥ್ ವಾದ ಮಂಡಿಸಿದ್ದರು.