ಜಿಲ್ಲೆಯಲ್ಲಿ ಮುಖ್ಯವಾಗಿ ಮಹಿಳೆಯರಿಗೆ, ಸ್ವಸಹಾಯ ಗುಂಪುಗಳಿಗೆ ಸಾಕಷ್ಟು ಸಾಲ ಸೌಲಭ್ಯಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಶ್ರಮಿಸಲಾಗುತ್ತಿದೆ. ಅದರ ಜೊತೆಗೆ ಜಿಲ್ಲೆಯಲ್ಲಿ ಮಧ್ಯಮಿಕ ಹಾಗೂ ಅಲ್ಪಾವಧಿ ಸಾಲ ವಿತರಣೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಓ ಶಾಂತ ಎಲ್ ಹುಲ್ಮನಿ ಹೇಳಿದರು.
ಮಂಡ್ಯ ನಗರದ ಆರ್ಸಿಟಿ ಸಭಾಂಗಣದಲ್ಲಿ ಶನಿವಾರ ನಡೆದ ಲೀಡ್ ಬ್ಯಾಂಕ್ನ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್ಗೆ ಸಂಬಂಧಿಸಿದಂತೆ 2022-23 ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ 2ನೇ ತ್ರೈಮಾಸಿಕಗೆ ಒಟ್ಟು 4,443 ಕೋಟಿ ರೂ.ಗಳ ಟಾರ್ಗೆಟ್ ಇದ್ದು, ಇದರಲ್ಲಿ ಶೇ.98ರಷ್ಟು ಸಾಧನೆ ಮಾಡಲಾಗಿದೆ. ಆದ್ಯತಾ ರಂಗದಲ್ಲಿ ಶೇ.102ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ರಂಗದಲ್ಲಿ ಶೇ.118 ರಷ್ಟು ಸಾಧನೆ ಮಾಡಿದ್ದೇವೆ. ಒಟ್ಟಾರೆ ನಮ್ಮ ಪ್ರಗತಿ ಉತ್ತಮವಾಗಿದೆ. ಸಭೆಯಲ್ಲಿ ಬ್ಯಾಂಕರ್ಗಳಿಗೆ ಹಲವು ಸಲಹೆಗಳನ್ನು ನೀಡಲಾಯಿತು, ದೀರ್ಘಾವಧಿ ಸಾಲದಲ್ಲಿ ಸ್ವಲ್ಪಮಟ್ಟಿಗೆ ಹಿಂದುಳಿದರಿಂದ ಈ ಬಗ್ಗೆ ಗಮನ ಹರಿಸಲು ಸೂಚನೆ ನೀಡಲಾಯಿತು.
ನರ್ಬಾಡ್ನ ಡಿಡಿಎಂ ಹರ್ಷಿತ ಮಾತನಾಡಿ, ದೀರ್ಘಾವಧಿ ಸಾಲಗಳಲ್ಲಿ ಹಿಂದುಳಿಯಲು ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ಕಾರಣವಾಗಿದೆ. ಕೈಗಾರಿಕೆಗಳು ಕಾರ್ಯ ನಿರ್ವಹಿಸಿದರೆ ಜನರ ಜೀವನ ಶೈಲಿ ಬದಲಾಗುತ್ತದೆ. ಹಲವು ಜನರಿಗೆ ಉದ್ಯೋಗ ಲಭಿಸುತ್ತದೆ. ಆಗ ಹೆಚ್ಚು ದೀರ್ಫಾವಧಿ ಸಾಲಗಳನ್ನು ನೀಡಲು ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಆರ್.ಬಿ.ಐ ವ್ಯವಸ್ಥಾಪಕ ರುಚಿಗುಪ್ತ, ಬ್ಯಾಂಕ್ ಆಫ್ ಬರೋಡದ ಪ್ರಾದೇಶೀಕ ವ್ಯವಸ್ಥಾಪಕ ಜಿ.ರೂಪಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಪಿ.ದೀಪಕ್ ಹಾಜರಿದ್ದರು.