ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಮಂಡ್ಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಇಂದು ಮಂಡ್ಯ ತಾಲ್ಲೂಕಿನ ಕೆರಗೋಡು, ಕಲ್ಮಂಟಿದೊಡ್ಡಿ, ಪಂಚೇಗೌಡನದೊಡ್ಡಿ, ಅಂಕಣ್ಣದೊಡ್ಡಿ, ಚಿಕ್ಕಬಳ್ಳಿ, ತಂಗಳಗೆರೆ, ಕಾರೆಕಟ್ಟೆ ಹಾಗೂ ಬೇಬಿ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯ ಓವರ್ ಹೆಡ್ ಟ್ಯಾಂಕ್ ಗಳು, ಮನೆ-ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿ, ತಾತ್ಕಾಲಿಕವಾಗಿ ಖಾಸಗಿ ಬೋರ್ ವೆಲ್ ಗಳ ಮೂಲಕ ಸಮಸ್ಯೆ ಬಗೆಹರಿಸಲು ಗ್ರಾಮಗಳಲ್ಲಿರುವ ಖಾಸಗಿ ಬೋರ್ ವೆಲ್ ಗಳನ್ನು ಪರಿಶೀಲಿಸಿದರು. ಪೈಪ್ ಲೈನ್ ಗುಣಮಟ್ಟ ಹಾಗೂ ಆಳದ ಬಗ್ಗೆ ಪರಿಶೀಲಿಸಿ, ಮಣ್ಣನ್ನು ಅಗೆದಿರುವ ಭಾಗದಲ್ಲಿ ಮಣ್ಣನ್ನು ತೆಗೆದು 03 ಅಡಿ ಆಳಕ್ಕೆ ಪೈಪ್ ಹಾಕಲು ಸೂಚಿಸಿದರು ಹಾಗೂ ಅಳವಡಿಸಲು ಕಾಂಕ್ರೀಟ್ ಅಗೆದಿರುವ ರಸ್ತೆ ಭಾಗಗಳಿಗೆ ಕೂಡಲೇ ಕಾಂಕ್ರೀಟ್ ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತರುವಾಯ ತಾಲ್ಲೂಕಿನ ರಾಜೇಗೌಡನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಅಭಾವದ ಬಗ್ಗೆ ಮತ್ತು ನೀರನ್ನು ಮಿತವಾಗಿ ಬಳಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.