ಕಳೆದ ಒಂದೂವರೆ ತಿಂಗಳಿನಿಂದ ಮಂಡ್ಯ ನಗರದಲ್ಲಿ ರೈತರು ತಾವು ಬೆಳೆದ ಕಬ್ಬು, ಭತ್ತ, ರಾಗಿ ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಮಾಡುತ್ತಿರುವ ಆಹೋರಾತ್ರಿ ಧರಣಿಯ ಸ್ಥಳಕ್ಕೆ ಜೆಡಿಎಸ್ ಪಕ್ಷದ ನಾಯಕರು ಹಾಗೂ ಶಾಸಕರು ಸೌಜನ್ಯಕ್ಕಾದರೂ ಬಂದು ಮಾತನಾಡಿಲ್ಲ, ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಓಟುಗಳಷ್ಟೆ ಮುಖ್ಯವಾಗಿವೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಶುಕ್ರವಾರ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಪರ ಎಂದು ಹೇಳುವ ಜೆಡಿಎಸ್ ಪಕ್ಷಕ್ಕೆ ನಮ್ಮ ಹೋರಾಟ ಕಾಣದಿರುವುದು ದುರಂತವಾಗಿದೆ ಎಂದು ಕಿಡಿಕಾರಿದರು.
ಅಧಿವೇಶನ ಕಾಲದಲ್ಲಿ ಯಾತ್ರೆ ಬೇಕಾಗಿತ್ತೇ..
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವಾಗ ಮಂಡ್ಯ ಜಿಲ್ಲೆಯ ಶಾಸಕರನ್ನು ಭಾಗವಹಿಸಲು ಬಿಡದೇ ಯಾತ್ರೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ರೈತಪರವಾಗಿ ದನಿಯೆತ್ತದ, ಎಲ್ಲಾ ಶಾಸಕರುಗಳು ಪಂಚರತ್ನ ಯಾತ್ರೆಯಲ್ಲಿ ತೊಡಗಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ, ಹೀಗಿರುವಾಗ ಕೃಷಿ ಕೂಲಿ ಕಾರ್ಮಿಕರು ಹಾಗೂ ಹಾಲು ಉತ್ಪಾದಕರು, ರೈತ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅನಿತಾ ಕುಮಾರಸ್ವಾಮಿ ಅವರು, ಸ್ತ್ರೀ ಶಕ್ತಿ ಸಂಘದಲ್ಲಿ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ನಿಮ್ಮ ಸಾಲವನ್ನು ಕುಮಾರಣ್ಣ ತೀರಿಸುತ್ತಾರೆ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಕಿಡಿಕಾರಿದರು.