ಮಂಡ್ಯ ಅಂದ್ರೆ ಇಂಡಿಯಾ ಎಂಬ ಮಾತಿದೆ. ಅದೇ ರೀತಿ ಮಂಡ್ಯದ ಹುಡುಗನೊಬ್ಬ ವಿಶ್ವ ಮಟ್ಟದಲ್ಲಿ ಮಂಡ್ಯದ ಹೆಸರನ್ನು ಎತ್ತಿ ಹಿಡಿದಿದ್ದಾನೆ. ಹೊಂಬಾಳೆ ಫಿಲ್ಮ್ಸ್ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ಸೆಳೆದಿರುವ, ಅದರಲ್ಲೂ ಬಾಲಿವುಡ್ ಬಾದ್ ಷಾಗಳೇ ಬೆಚ್ಚಿ ಬೀಳುವಂತೆ ಮಾಡಿರುವುದು ಹೊಂಬಾಳೆ ಫಿಲ್ಮ್ಸ್ ನ ನಿರ್ಮಾಪಕ ವಿಜಯ್ ಕಿರಂಗಂದೂರು.
ರಾಜಕುಮಾರ, ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ಬಂಡವಾಳವನ್ನು ಚಿತ್ರರಂಗದಲ್ಲಿ ಹೂಡಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಂಡ್ಯದ ಹುಡುಗ ದೊಡ್ಡ ಹವಾ ಎಬ್ಬಿಸಿದ್ದಾನೆ.
ಒಂದು ಮೂಲದ ಪ್ರಕಾರ ಈಗಾಗಲೇ ಅವರು ಸಾವಿರ ಕೋಟಿಯಷ್ಟು ಹಣವನ್ನು ಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರು ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಬಾಲಿವುಡ್ ಬಾದ ಷಾ ಶಾರುಖ್ ಖಾನ್ ಸಿನಿಮಾ ಮಾಡುವ ಕುರಿತು ಮಾತುಕತೆ ಕೂಡ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ .
ಕನ್ನಡ ನಿರ್ಮಾಣ ಸಂಸ್ಥೆಯೊಂದು ಸಿನಿಮಾ ರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಿದೆ. ಅಲ್ಲದೇ, ಭಾರತೀಯ ಬಹುತೇಕ ಭಾಷೆಯ ಚಿತ್ರಗಳಲ್ಲಿ ಸಿನಿಮಾ ಮಾಡುವ ಗುರಿ ಹೊಂದಲಾಗಿದೆ. ಇದರ ಭಾಗವಾಗಿಯೇ ದಕ್ಷಿಣದ ಅಷ್ಟೂ ಭಾಷೆಗಳಲ್ಲಿ ಈಗಾಗಲೇ ಚಿತ್ರ ಮಾಡಲಾಗುತ್ತಿದೆ. ಸದ್ಯದಲ್ಲೇ ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಯೋಜನೆಯೊಂದು ಬಹಿರಂಗಗೊಳ್ಳಲಿದೆ.