ಶಿಷ್ಯ ಕದಲೂರು ಉದಯ್ ಗಾಗಿ ತನ್ನ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರ ಕುಟುಂಬದ ಕುಡಿ ಗುರುಚರಣ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈ ಕೊಡ್ತಾರೆ ಎನ್ನುವ ಸುದ್ದಿ ಕ್ಷೇತ್ರದಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ.
ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿ ಅವರೆಲ್ಲಾ ಈಗಾಗಲೇ ಭಿನ್ನಮತ,ಬಂಡಾಯ ಶಮನ ಎಂದೆಲ್ಲಾ ಓಡಾಡುತ್ತಿದ್ದರೆ,ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕದಲೂರು ಉದಯ್ ಹಾಗೂ ಗುರುಚರಣ್ ಏದುಸಿರು ಬಿಡುತ್ತಿದ್ದಾರೆ.
ತನ್ನ ಶಿಷ್ಯ ಕದಲೂರು ಉದಯ್ ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿಯೇ ಡಿ.ಕೆ.ಶಿವಕುಮಾರ್ ಮದ್ದೂರು ಕ್ಷೇತ್ರದ ಟಿಕೆಟ್ ಘೋಷಣೆ ವಿಳಂಬ ಮಾಡಿದ್ದಾರೆ ಎನ್ನುವ ಕೂಗು ಗುರುಚರಣ್ ಬೆಂಬಲಿಗರಿಂದ ಕೇಳಿ ಬರುತ್ತಿದೆ.
ಮದ್ದೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಮೀನಾಮೇಷ ಎಣಿಸುತ್ತಿರುವ ಹಿಂದೆ ಯಾವ ತಂತ್ರಗಾರಿಕೆ ಇದೆಯೋ ಗೊತ್ತಾಗುತ್ತಿಲ್ಲ.ಕದಲೂರು ಉದಯ್ ಅವರಿಗೋ,ಗುರುಚರಣ್ ಅವರಿಗೋ ಟಿಕೆಟ್ ಘೋಷಣೆ ಮಾಡುವುದನ್ನು ಬಿಟ್ಟು ಹೀಗೆ ವಿಳಂಬ ಮಾಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಈಗಾಗಲೇ ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರ ಹೆಸರು ಘೋಷಣೆ ಆಗಿದೆ.ಕಾಂಗ್ರೆಸ್ ಟಿಕೆಟ್ ವಿಳಂಬ ಮಾಡುತ್ತಿರುವುದರಿಂದ ಹಲವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ.ಈ ಅಸಮಾಧಾನಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಗಾಳ ಹಾಕಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ.ಕೊನೆ ಗಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡುವುದರಿಂದ,ಬಂಡಾಯ ಏಳುವವರನ್ನು ಸಮಾಧಾನ ಮಾಡುತ್ತಾರೋ?,ಇಲ್ಲಾ ಕ್ಷೇತ್ರದಲ್ಲಿ ಮತದಾರರ ಮನೆ ಬಾಗಿಲಿಗೆ ಹೋಗುತ್ತಾರೋ?
ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಳಂಬ ಮಾಡಿರುವುದು ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂಬುದು ಮದ್ದೂರು ಕಾಂಗ್ರೆಸ್ ಮುಖಂಡರೊಬ್ಬರ ಮಾತು