Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಟುಂಬದ ಬಗ್ಗೆ ಜವಾಬ್ದಾರಿ ಇರಲಿ : ನಾರಾಯಣಗೌಡ

ಪತ್ರಕರ್ತರು ತಮ್ಮ ಕೆಲಸದ ನಡುವೆ ಕುಟುಂಬವನ್ನೇ ಮರೆತುಬಿಟ್ಟಿರುತ್ತಾರೆ. ಭಯ-ಭೀತಿ ಇಲ್ಲದೆ ಕಾರ್ಯನಿರ್ವಹಿಸುವ ಅವರು ಮೊದಲು ತಮ್ಮ ಕುಟುಂಬ ಸದಸ್ಯರನ್ನು ನೆನಪಿಸಿಕೊಂಡು ಕಾರ್ಯನಿರ್ವಹಿಸಲಿ ಎಂದು ರೇಷ್ಮೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಸಲಹೆ ನೀಡಿದರು.

ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರ ಗೌಡ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಮಂಡಳಿಯ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಭಯ, ಭೀತಿಯಿಲ್ಲದೆ ಪತ್ರಕರ್ತರು ಕರ್ತವ್ಯ ನಿರ್ವಹಿಸಿದ್ದನ್ನು ನಾನು ನೋಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಅವರು ನೀಡಿದ ಸಹಕಾರವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಆದರೆ ಅವರು ತಮ್ಮ ತಂದೆ-ತಾಯಿ ಹೆಂಡತಿ-ಮಕ್ಕಳನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಪತ್ರಕರ್ತರು ಜವಾಬ್ದಾರಿ ಜೊತೆಗೆ ಸೇವಾ ಮನೋ ಭಾವನೆ ಹೊಂದಿದ್ದಾರೆ. ಕಷ್ಟ,ಸುಖಗಳಲ್ಲಿ ಭಾಗಿಯಾಗಿರುವ ಇವರ ನಡುವೆ ಕಿತ್ತಾಟ, ಕೂಗಾಟ ಎಲ್ಲವೂ ಇದೆ. ಆದರೆ ಕುರಿ, ಕೋಳಿ ಕುಯ್ದು ಊಟಕ್ಕೆ ಕರೆದರೆ ಎಲ್ಲವನ್ನು ಮರೆತು ಒಂದಾಗ್ತಾರೆ ಎಂದರು.

ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಮುಡಾ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಬಾಕಿ ಇರುವ 3ಲಕ್ಷ ರೂ.ಹಣವನ್ನು ಒಂದು ವಾರದೊಳಗೆ ಕೊಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ನನ್ನ ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ನಡೆಯುತ್ತಿದ್ದು ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದು ನನ್ನ ಗುರಿ ಎಂದರು. ಜನ್ಮ ಭೂಮಿಯ ಋಣ ತೀರಿಸುವ ಭಾಗ್ಯ ಒದಗಿಬಂದಿದೆ. ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮ ಆಯೋಜಿಸಿ ಉತ್ತಮ ಯಶಸ್ಸು ದೊರಕಿದ್ದು, ನನಗೂ ಒಳ್ಳೆಯ ಹೆಸರು ಬಂದಿದೆ ಎಂದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡ, ಪತ್ರಕರ್ತರಾದ ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು,ಕೆ.ಸಿ.ಮಂಜುನಾಥ್, ನವೀನ್ ಚಿಕ್ಕಮಂಡ್ಯ ಮೋಹನ್ ರಾಜ್, ಕೆ.ಎನ್. ನವೀನ್ ಕುಮಾರ್ ಸಿ.ಎನ್.ಮಂಜುನಾಥ್ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!