ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾಮಫಲಕದಲ್ಲಿ ಗ್ರಾಮದ ಹೆಸರೇ ಬದಲಾಗಿ ಗೊಂದಲ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಈ ಅಚಾತುರ್ಯ ಜರುಗಿದ್ದು, ಗೆಜ್ಜಲಗೆರೆ ಬದಲು ಹಲಸಗೆರೆ ಎಂದು ನಮೂದಿಸಿ ದಿಕ್ಕು ತಪ್ಪಿಸಿದ್ದಾರೆ.
ಹೈವೇ ಯೋಜನೆ ಅರಂಭವಾದಂದಿನಿಂದ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಹೈವೇ ಪ್ರಾಧಿಕಾರ ಸದ್ಯ ನಾಮಫಲಕ ವಿವಾದದಿಂದ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಹೇಳಿ ಕೇಳಿ ಗೆಜ್ಜಲಗೆರೆ ಗ್ರಾಮ ರೈತ ಹೋರಾಟಗಾರರಿಂದ ತುಂಬಿರುವ ಗ್ರಾಮ. ಮಂಡ್ಯ ಹಾಲು ಒಕ್ಕೂಟ, ಗಾರ್ಮೆಂಟ್ಸ್ , ಗ್ರಾನೈಟ್ಸ್ ಸೇರಿದಂತೆ ಹಲವು ಕೈಗಾರಿಕೆಗಳಿಂದ ಕೂಡಿದ ಗೆಜ್ಜಲಗೆರೆ ಗ್ರಾಮಕ್ಕೆ ಅಳವಡಿಸಿರುವ ನಾಮಫಲಕದಿಂದ ಗ್ರಾಮಕ್ಕೆ ಆಗಮಿಸುವ ಹೊರಗಿನ ಬಂಧು-ಮಿತ್ರರು, ಕೈಗಾರಿಕಾ ಕೇಂದ್ರಗಳಿಗೆ ಬರುವ ಜನರು ದಿಕ್ಕು ತಪ್ಪುತ್ತಿದ್ದಾರೆ.
ಮದ್ದೂರಿನಿಂದ ಮಂಡ್ಯಕ್ಕೆ ಹಾಗೂ ಮಂಡ್ಯದಿಂದ ಮದ್ದೂರಿಗೆ ತೆರಳುವ ಎರಡು ಮಾರ್ಗಗಳಲ್ಲಿಯೂ ತಪ್ಪು ನಾಮಫಲಕ ಹಾಕಿರುವುದು ಗಮನಾರ್ಹ.
ಗೆಜ್ಜಲಗೆರೆಯಿಂದ ಮುಂದಿರುವ ಹನಕೆರೆ ಗ್ರಾಮದ ಬಳಿ ಹಲಸಗೆರೆ ಬೇಚಾರಕ್ ಗ್ರಾಮವಾಗಿದೆ. ಮೂರು ಕಿ.ಮೀ ಮುಂದಿರುವ ಗ್ರಾಮದ ಹೆಸರನ್ನು ಅಳವಡಿಸಿ ದಾರಿ ತಪ್ಪಿಸಲಾಗುತ್ತಿದೆ ಎಂದು ಗ್ರಾಮದ ಮಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೆಜ್ಜಲಗೆರೆ ಗ್ರಾಮದ ಸರ್ಕಲ್’ನಿಂದ ಸಾದೊಳಲು, ಕುದರಗುಂಡಿ, ಕನ್ನಲಿ, ವಳಗೆರೆಹಳ್ಳಿ ಮುಂತಾದೆಡೆ ತೆರಳುವ ಹೊಸದಾಗಿ ಆಗಮಿಸುವ ಜನರು ಗ್ರಾಮದ ತಪ್ಪು ಮಾಹಿತಿಯಿಂದ ದಿಕ್ಕು ತಪ್ಪುತ್ತಿದ್ದಾರೆ.
ಈ ಪ್ರಮಾದ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ತಂದು ತಿಂಗಳಾದರೂ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ