ಮಂಡ್ಯನಗರ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಬಿ.ಎಸ್. ವೆಂಕಟೇಶ್ ತಮ್ಮ ಮಗಳಾದ ಬಿ.ವಿ. ವರ್ಷಾ ಅವರಿಗೆ ಅಧಿಕಾರ ಹಸ್ತಾಂತರಿಸಿದ ವಿಷಯ ತಿಳಿದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ದೂರವಾಣಿ ಕರೆ ಮಾಡಿ ತಂದೆ ಮಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ಮಂಡ್ಯ ನಗರದ ಸೆಂಟ್ರಲ್ ಠಾಣೆಯಲ್ಲಿ ಪಿಎಸ್ಐ ಬಿ.ಎಸ್.ವೆಂಕಟೇಶ್ ಮಂಡ್ಯ ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ಅದೇ ಹುದ್ದೆಗೆ ಅವರ ಪುತ್ರಿ ಬಿ.ವಿ.ವರ್ಷಾ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದು, ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಕರೆ ಮಾಡಿ ಅಭಿನಂದನೆ ಸಲ್ಲಿಸಿ, ತಮ್ಮ ವೃತ್ತಿ ಜೀವನದಲ್ಲಿ ಪೋಲೀಸ್ ಇಲಾಖೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತನದಿಂದ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೂ ಪ್ರೇರಣೆಯಾಗುವಂತೆ ಕೆಲಸ ಮಾಡಿ ಎಂದು ಶುಭ ಹಾರೈಸಿದ್ದಾರೆ.
2022 ರ ಬ್ಯಾಚ್ ನಲ್ಲಿ ಪಿಎಸ್ಐ ಆಗಿರುವ ವರ್ಷಾ ಅವರು ಕಲಬುರುಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ ಒಂದು ವರ್ಷ ಪ್ರೋಬೆಸನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಈಗ ಪಿಎಸ್ಐ ಆಗಿ ನೇಮಕಗೊಂಡಿದ್ದಾರೆ.