ವರದಿ : ಪ್ರಭು ವಿ.ಎಸ್.
ಮದ್ದೂರು ತಾಲೂಕು ಅಗ್ನಿವಂಶ ಕ್ಷತ್ರಿಯಾ ತಿಗಳರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ಅಗ್ನಿಬನ್ನಿರಾಯಸ್ವಾಮಿ ಅವರ 3ನೇ ವರ್ಷದ ಜಯಂತೋತ್ಸವವು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಡೊಳ್ಳು ಕುಣಿತ, ಪೂಜಾ ಕುಣಿತ ತಮಟೆ ನಗಾರಿಗಳೊಂದಿಗೆ ಮತ್ತು ಪೂರ್ಣಕುಂಭ ಸ್ವಾಗತದೊಂದಿಗೆ ಅಗ್ನಿ ಬನ್ನಿರಾಯಸ್ವಾಮಿರವರ ಭಾವಚಿತ್ರವನ್ನು ಬೆಳ್ಳಿ ರಥದ ಮೂಲಕ ಪೇಟೇಬೀದಿ ಮಾರ್ಗದುದ್ಧಕ್ಕೂ ಮೆರವಣಿಗೆ ಕೈಗೊಂಡು ಬಳಿಕ ಮದ್ದೂರಮ್ಮ ದೇವಾಲಯದಲ್ಲಿ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲೂಕು ಅಗ್ನಿವಂಶ ಕ್ಷತ್ರಿಯಾ ತಿಗಳರ ಕ್ಷೇಮಾಭಿವೃದ್ಧಿ ಟ್ರಸ್ಟ್ ತಾಲೂಕು ಅಧ್ಯಕ್ಷ ಎಂ.ಜೆ. ಶಿವಣ್ಣ ಮಾತನಾಡಿ ತಿಗಳರ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಸರಕಾರ ಅಗತ್ಯ ಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಸರಕಾರದ ವತಿಯಿಂದಲೇ ಅಗ್ನಿಬನ್ನಿರಾಯಸ್ವಾಮಿ ಅವರ ಜಯಂತೋತ್ಸವ ಕಾರ್ಯಕ್ರಮ ಆಚರಿಸಲು ಮುಂದಾಗುವಂತೆ ಕೂಡಲೇ ಸರಕಾರ ನಿಗಮ ಮಂಡಳಿ ಸ್ಥಾಪನೆ ಮಾಡುವ ಜತೆಗೆ ರಾಜಕೀಯವಾಗಿ ಸ್ಥಾನಮಾನ ನೀಡಿ ಸಮುದಾಯ ಮಕ್ಕಳಿಗೆ ಉಚಿತ ಶಿಕ್ಷಣ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಿ ಸಾಮಾಜಿಕವಾಗಿ ಆರ್ಥಿಕ ಸಬಲರಾಗಲು ಕ್ರಮವಹಿಸಬೇಕೆಂದರು.
ತಾಲೂಕಿನಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಸಮುದಾಯದವರಿದ್ದು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಸರಕಾರದ ಸವಲತ್ತುಗಳನ್ನು ನೀಡಲು ಮತ್ತು ಇನ್ನಿತರೆ ಯೋಜನೆಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಸಂಘಟನೆಯ ಗೌರವಾಧ್ಯಕ್ಷ ಎಂ.ವೈ. ಶಿವಣ್ಣ, ಉಪಾಧ್ಯಕ್ಷ ಎಂ.ಟಿ. ಕೃಷ್ಣ, ಕಾರ್ಯದರ್ಶಿ ಎಂ.ಪಿ. ಸ್ವಾಮಿ, ಪದಾಧಿಕಾರಿಗಳಾದ ಎಚ್.ಡಿ. ಸುರೇಶ್, ಮಂಜುನಾಥ್, ಮುತ್ತುರಾಜು, ನರಸಿಂಹಮೂರ್ತಿ, ಶ್ರೀನಿವಾಸ್, ದಾಸಪ್ಪ, ತಿಮ್ಮಯ್ಯ, ಮಧುಸೂದನ್, ಚಿನ್ನಗಿರಿ, ಸತೀಶ್ ಇತರರಿದ್ದರು.