ನಾಗಮಂಗಲದಲ್ಲಿ ಇತ್ತಿಚೇಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಆರ್’ಟಿಸಿ ನೌಕರ ಜಗದೀಶ್ ಅವರಿಗೆ ಉನ್ನತ ವೈದಕೀಯ ಚಿಕಿತ್ಸೆ ಕೊಡಿಸಲು ತಾಲ್ಲೂಕು ಆಡಳಿತ ಸಿದ್ದವಿದ್ದರೂ, ಜೆಡಿಎಸ್ ನ ಮಾಜಿ ಶಾಸಕ ಸುರೇಶ್ ಗೌಡ ಅವರು ಅಡ್ಡಿಪಡಿಸುತ್ತಿದ್ದಾರೆ, ಈ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಗೆ ಯತ್ನಿಸಿದ ನೌಕರನನ್ನು ಉನ್ನತ ಚಿಕಿತ್ಸೆ ಗೆ ಕಳಿಸುವುದಕ್ಕೆ ಅವರ ಕುಟುಂಬದವರು ಸಿದ್ದವಿದ್ದರೂ, ಮಾಜಿ ಶಾಸಕರು ವಿರೋಧ ಮಾಡುತ್ತಿರುವುದು ಖಂಡನೀಯ ಎಂದು ಸುರೇಶ್ ಗೌಡರ ಹೆಸರೇಳದೆ ವಾಗ್ದಾಳಿ ನಡೆಸಿದರು.
ನೌಕರನ ಆತ್ಮಹತ್ಯೆ ಯತ್ನ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದನ ಒಳಗೆ ಹಾಗೂ ಹೊರಗೆ ಅಸಂಬದ್ದ ಹೇಳಿಕೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ, ಅವರು ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ದಿ ಪರವಾದ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಮಂಡ್ಯ ಜಿಲ್ಲೆಯ ಜನತೆ ಕಳೆದ ಬಾರಿ ಜೆಡಿಎಸ್ ಅನ್ನು ಬೆಂಬಲಿಸಿದ್ದರು. ಆಗ ಮಂಡ್ಯ ಜಿಲ್ಲೆಯ ಅಭಿವೃದ್ದಿಯನ್ನು ಹಳ್ಳ ಹಿಡಿಸಿದ್ದು ನಗ್ನ ಸತ್ಯವಾಗಿದೆ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ನಗರಸಭಾ ಸದಸ್ಯ ನಯೀಂ, ಮುಖಂಡರಾದ ನಾಗರಾಜು, ಸುಂಡಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.